ಲೋಕಲ್ಯಾಣಾರ್ಥವಾಗಿ ವಿಶ್ವಜಿತ್ ಅತಿರಾತ್ರ ಸೋಮಯಾಗ

17 Dec 2018 5:42 PM |
1149 Report

ಹಿಂದಿನ ಕಾಲದಲ್ಲಿ ಲೋಕಲ್ಯಾಣಾರ್ಥವಾಗಿ ಯಾಗ ಯಜ್ಞಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಜಗತ್ತು ಸುಖ, ಶಾಂತಿ, ಸಮೃದ್ಧಿಯನ್ನು ಹೊಂದುತ್ತದೆಯೆಂಬ ಸತ್ಯ. ಇದೀಗ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಲೋಕಕಲ್ಯಾಣಕ್ಕಾಗಿ ಮಹಾ ಸೋಮಯಾಗವು ನಡೆಯಲಿದ್ದು ಮತ್ತೆ ಭಗವಂತನ ಕೃಪೆಗೆ ಸಾಕ್ಷಿಯಾಗುವ ಸನ್ನಿವೇಶಗಳು ಎದುರಾಗಲಿದೆ. ಅಂದರೆ ಕಾಸರಗೋಡಿನ ಉಪ್ಪಳ ಸಮೀಪದ “ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ”ವು ಈ ಶತಮಾನದಲ್ಲಿ ಭೂಮಿಯಲ್ಲಿ ಅವತರಿಸಿದ ಅವಧೂತ ಭಗವಾನ್ ಶ್ರೀ ನಿತ್ಯಾನಂದರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ. ಮಾಣಿಲ ಶ್ರೀಧಾಮದ “ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ”ಯವರ ಮಾರ್ಗದರ್ಶನದಲ್ಲಿ “ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸ್ವಾಮೀಜಿಗಳ ಪರಿಶ್ರಮದ ಸಾಧನೆಯ ಮೂಲಕ “ಕೊಂಡೆವೂರು” ಪುಣ್ಯಕ್ಷೇತ್ರವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಸರ್ವವೇದ್ಯ. ಪೂಜ್ಯರು ವೇದಮಾತೆ ಶ್ರೀ ಗಾಯತ್ರೀ ದೇವಿ, ಸದ್ಗುರು ಶ್ರೀ ನಿತ್ಯಾನಂದ ಭಗವಾನರನ್ನು ಆರಾಧಿಸುವ ಜೊತೆಗೆ “ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಧಾರ” ಎಂಬ ಮಹತ್ವಪೂರ್ಣವಾದ ಐದು ಯೋಜನೆಗಳ ಮೂಲಕ, ಧಾರ್ಮಿಕ, ಆದ್ಯಾತ್ಮಿಕ, ಸಾಮಾಜಿಕ ಮತ್ತು ಶಿಕ್ಷಣಕ್ಕೆ ಜಾಗೃತಿಯ ಕೈಂಕರ್ಯದಲ್ಲಿ ಮಠವನ್ನು ಮುನ್ನಡೆಸುತ್ತಿದ್ದಾರೆ.

ಲೋಕಕಲ್ಯಾಣಾರ್ಥವಾಗಿ ಸಹಸ್ರಚಂಡಿಕಾಯಾಗ, ಅತೃಪೂರ್ಣವಾದ ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ, ಚತುರ್ವೇದ ಸಂಹಿತ ಯಾಗ ಮತ್ತು ನಕ್ಷತ್ರೇಷ್ಟಿ ಇದೇ ಮೊದಲಾದ ಯಾಗ ಯಜ್ಞಗಳ ಮೂಲಕ ಈ ಸನ್ನಿಧಿಯು “ಯಾಗಭೂಮಿ” ಎಂದೆನಿಸಿದೆ. ಪರಮ ಪೂಜ್ಯ ಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಸಮಷ್ಠಿಯ ಹಿತಕ್ಕಾಗಿ ಅತೀ ವಿಶಿಷ್ಟವಾದ “ವಿಶ್ವಜಿತ್ ಅತಿರಾತ್ರ ಸೋಮಯಾಗ”(ಅರುಣ ಕೇತುಕ ಚಯನದೊಂದಿಗೆ)ವು 2019 ಫೆಬ್ರವರಿ 18 ರಿಂದ 24ರತನಕ ಆಶ್ರಮದಲ್ಲಿ ಸಂಪನ್ನಗೊಳ್ಳಲಿದೆ. ಇದರ ಪೂರ್ವಭಾವಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಅಂಗವಾಗಿ ಈಗಾಗಲೇ “ವಿಷ್ಣು ಸಹಸ್ರನಾಮ ಅಭಿಯಾನ”, “ಸಹಸ್ರ ವೃಕ್ಷ ಸಮೃದ್ಧಿ ಅಭಿಯಾನ” ಮತ್ತು “ಸಹಸ್ರ ಅಕ್ಷದಾನ ಸಂಕಲ್ಪ ಅಭಿಯಾನ”ಗಳಿಗೆ ಚಾಲನೆ ನೀಡಲಾಗಿದೆ.

ಉತ್ತರ ಕೇರಳದ ಈ ಭಾಗದಲ್ಲಿ ಪ್ರಪ್ರಥಮ ಬಾರಿ ನಡೆಯಲಿರುವ ಅತ್ಯಪೂರ್ಣವೂ, ಅತೀ ವಿಶಿಷ್ಟವೂ, ಅತೀ ವಿರಳವೂ ಆದ ಈ ಮಹಾಯಾಗದ ಸಿದ್ಧತೆ ಭರದಿಂದ ನಡೆಯುತ್ತಿದ್ದು ದೇಶ ವಿದೇಶದಿಂದ ಲಕ್ಷಾಂತರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಮಹಾಕಾರ್ಯದ ಸಾಕಾರಕ್ಕಾಗಿ ಸಹೃದಯಿ ಭಗವಾತ್ ಭಕ್ತರಾದ ತಾವೆಲ್ಲರೂ ತನು ಮನ ಧನದ ತೃಕರಣಾ ಪೂರ್ವಕ ಸಹಕಾರವನ್ನು ನೀಡಿ ಯಜ್ಞೇಶ್ವರನ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಯಾಗದ ಅಧ್ಯಕ್ಷರು ಸೇರಿದಂತೆ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ಯಾಗದ ಮಹತ್ವ

ಯಜ್ಞವು ವೈದಿಕ ಧರ್ಮದ ಸಾರ ಸರ್ವಸ್ವ. ಅಗ್ನಿಯಲ್ಲಿ ಮಂತ್ರಪೂರ್ವಕವಾಗಿ ಹವಿಸ್ಸನ್ನು ಅರ್ಪಿಸುವ ಕ್ರಿಯೆಯೇ ಯಜ್ಞವಾಗಿದೆ. ಇದರ ಸಾಮಾಜಿಕ ಮತ್ತು ಆದ್ಯಾತ್ಮಿಕ ರೂಪಗಳಾಗಿ ಯಾಗ, ಯಜ್ಞ, ಹವನ, ಹೋಮ, ಸತ್ರ, ಕ್ರತು, ಇಷ್ಟಿ ಮುಂತಾದ ವೈಧಿಕ ಕ್ರಿಯೆಗಳು ರೂಪುಗೊಂಡಿವೆ, ದೇವತೆಗಳು ಯಜ್ಞ ಮಾಡಿ ತಾವು ಲೋಕದ ಧಾರಣೆ ಮಾಡುವ ಅಧಿಕಾರವನ್ನು ಗಳಿಸಿ ಪೂಜ್ಯರಾದರು. ಯಜ್ಞದಿಂದ ಶತ್ರುಗಳೂ ಮಿತ್ರರಾಗುವರು. ಯಜ್ಞದಲ್ಲಿ ಎಲ್ಲವೂ ನೆಲೆಗೊಂಡಿದೆ.ಆದ್ದರಿಂದ ತಿಳಿದವರು ಯಜ್ಞವನ್ನು ಸರ್ವಶ್ರೇಷ್ಟವೆಂದು ಹೇಳುವರು ಎಂದು ಯಜುರ್ವೇದವು ಹೇಳುತ್ತದೆ. “ವೇದೋಖಿಲೋ ಧರ್ಮ ಮೂಲಮ್” ಎಂದು ಶಾಸ್ತ್ರಕಾರರು ಎಲ್ಲ ಧರ್ಮದ ಮೂಲವನ್ನಾಗಿ “ವೇದ”ವನ್ನು ನಿರ್ಧೇಶಿಸಿದ್ದಾರೆ. ವೇದದಿಂದ ಮೇಲ್ಪಟ್ಟ ವಿಧಿ ನಿಷೇಧಗಳನ್ನು “ಧರ್ಮ” ಶಬ್ಧದಿಂದ ವ್ಯವಹರಿಸಲಾಗುತ್ತಿದೆ.ಇದು ತುಂಬಾ ವಿಸ್ತಾರವಾದ ಅರ್ಥ ವ್ಯಾಪ್ತಿಯುಳ್ಳ ಶಬ್ಧ. ಆದುದರಿಂದಲೇ ಯಾವುದರ ಆಚರಣೆಯಿಂದ ಮಾನವನ ಐಹಿಕ-ಪಾರಮಾರ್ಥಿಕ ಅಬ್ಯುದಯಗಳು ಉಂಟಾಗುವವೋ ಅದನ್ನು “ಧರ್ಮ” ಎಂಬ ಶಬ್ಧದಿಂದ ಹೇಳಿದ್ದಾರೆ. ಮನುಷ್ಯ ಧರ್ಮ, ರಾಜಧರ್ಮ, ಇತ್ಯಾದಿಯಾಗಿ ಹೇಳಿರುವಂತೆಯೇ ವರ್ಣ ಧರ್ಮ, ಆಶ್ರಮ ಧರ್ಮ, ವರ್ಣಾಶ್ರಯ ಧರ್ಮವೆಂದು ಧರ್ಮವನ್ನು ಅನೇಕ ವಿಭಾಗಗಳನ್ನಾಗಿ ಮಾಡಲಾಗಿದೆ. ಈ ಎಲ್ಲಾ ಧರ್ಮದ ಆಚರಣೆ-ಅನುಸರಣೆಗಳ ಫಲ “ಲೋಕಹಿತ”ವೇ ಆಗಿದೆ. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನೂ ತನ್ನ ಕರ್ತವ್ಯ-ಕರ್ಮಗಳಿಂದ ಲೋಕಕ್ಕೆ ಒಳಿತನ್ನು ಬಯಸಬೇಕೆಂಬುವುದೇ ಧರ್ಮಾಚರಣೆಯ ಹಿಂದಿನ ಸಂದೇಶ. ಇದು ವೇದೋಕ್ತವಾದ ಯಜ್ಞಗಳ ಆಚರಣೆಯಿಂದ ಸಾಧ್ಯವಾಗಿದೆ. ಭಗವಂತ ಮನುಷ್ಯರನ್ನೂ, ಯಜ್ಞವನ್ನೂ ಒಟ್ಟಿಗೆ ಸೃಷ್ಟಿಸಿ ಯಜ್ಞದ ಆಚರಣೆಯಿಂದ ನಿಮಗೆ ಬೇಕಾದುದನ್ನು ಸಾಧಿಸಿಕೊಳ್ಳಿ ಎಂದು ಮನುಷ್ಯರಿಗೆ ಉಪದೇಶಿಸಿರುವವನೆಂದು ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ. ಯಜ್ಞದಿಂದ ಮಳೆ ಬಂದು ಬೆಳೆ ಬೆಳೆದು ಸಮೃದ್ಧಿ ಉಂಟಾಗುತ್ತದೆಯೆಂದು ಎಲ್ಲರ ಮನೋಭಾವವಿದೆ. ಇಂತಹಾ ಯಜ್ಞಗಳಲ್ಲಿ “ಶ್ರೌತಯಜ್ಞ”ಗಳು ಬಹುಮುಖ್ಯವಾದವುಗಳಾಗಿದ್ದು, ಇವುಗಳನ್ನು ಹದಿನಾಲ್ಕಾಗಿ ವಿಭಾಗಿಸಿದ್ದಾರೆ. ಅವುಗಳಲ್ಲಿ ಮೊದಲ ಏಳು ಯಜ್ಞಗಳನ್ನು “ಹವಿರ್ಯಜ್ಞ”ಗಳೆಂದೂ ಆನಂತರದ ಏಳು ಯಜ್ಞಗಳನ್ನು ಸೋಮಯಜ್ಞಗಳೆಂದೂ ಕರೆದಿದ್ದಾರೆ.

1.ಅಗ್ನ್ಯಾದಾನ 2.ಅಗ್ನಿಹೋತ್ರ 3.ದರ್ಶಪೂರ್ಣಮಾಸ 4. ಪಿಂಡಪಿತೃಯಜ್ಞ 5. ಚಾತುರ್ಮಾಸ 6. ನಿರೂಢ ಪಾಶುಬಂಧ 7. ಸೌತ್ರಾಮಣಿ ಎಂಬ ಏಳು ಯಜ್ಞಗಳು “ಹವಿರ್ಯಜ್ಞ”ಗಳು.

  1. ಅಗ್ನಿಷ್ಟೋಮ 2. ಅತ್ಯಗ್ನಿಷ್ಟೋಮ 3. ಉಕ್ಥ್ಯ 4. ಷೋಡಶೀ 5. ವಾಜಪೇಯ 6. ಅತಿರಾತ್ರ 7. ಆಪ್ತೋರ್ಯಾಮ ಎಂಬ ಏಳು ಯಜ್ಞಗಳು “ಸೋಮಯಜ್ಞ”ಗಳಾಗಿವೆ.

ಸೋಮಯಜ್ಞಗಳಲ್ಲಿ ಸೋಮಲತೆಯನ್ನು ಹಿಂಡಿ ತಯಾರಿಸುವ “ಸೋಮರಸ”ವೇ ಪ್ರಧಾನ ದ್ರವ್ಯವೆನಿಸಿದೆ. ಇಂದ್ರನೇ ಈ ಯಜ್ಞಕ್ಕೆ ಪ್ರಧಾನ ದೇವತೆ. ಸೋಮನೆಂದರೆ ಚಂದ್ರ. ಚಂದ್ರನಿಗೆ ಶುಕ್ಲ-ಕೃಷ್ಣ ಪಕ್ಷಗಳಲ್ಲಿ ವೃದ್ಧಿ ಕ್ಷಯಗಳಾಗಿವೆ. ಅದೇ ಧರ್ಮ ಸೋಮಲತೆಯಲ್ಲಿ ಕಾಣಸಿಗುತ್ತದೆ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಒಂದೊಂದೇ ಎಲೆಗಳು ಮೂಡಿ ಹುಣ್ಣಿಮೆಯಂದು 15 ಎಲೆಗಳಾಗುತ್ತದೆ. ಮತ್ತೆ ಒಂದೊಂದು ಎಲೆಗಳು ಉದುರಿ ಬಿದ್ದು ಅಮವಾಸ್ಯೆ ದಿನ ಎಲ್ಲಾ ಎಲೆಗಳೂ ಉದುರಿ ಬೀಳುತ್ತದೆ. ಅಂದು ಸಾರಾಂಶವು ಪೂರ್ಣವಾಗಿ ಬಳ್ಳಿಯಲ್ಲಿ ಇಂತಹಾ ಸೋಮಲತೆಯನ್ನು ಯಜ್ಞವಾಗಿ ಸಂಗ್ರಹಿಸಬೇಕು. ಸೋಮಯಾಗದಲ್ಲಿ ಹದಿನಾರು ಮಂದಿ ಋತ್ವಿಜರಿದ್ದು ಅವರನ್ನು 4 ಗಣಗಳಾಗಿ ವಿಭಾಗಿಸಿದ್ದಾರೆ.

  1. ಹೋತೃಗಣ 2. ಅದ್ವರ್ಯುಗಣ 3. ಔದ್ಗತೃಗಣ 4. ಬ್ರಹ್ಮಗಣ

ದೇವತೆಗಳ ಆಹ್ವಾನ “ಹೋತೃ”ವಿನ ಕೆಲಸವಾದರೆ ಯಜ್ಞ ಕಲಾಪಗಳ ನಿರ್ವಹಣೆ “ಅದರ್ಯು”ವಿನ ಕೆಲಸ. ಸಾಮಗಾನದಿಂದ ದೇವತೆಗಳನ್ನು ಸಂತೋಷಪಡಿಸುವುದು “ಉದ್ಗಾತೃ”ವಿನ ಕೆಲಸ. “ಬ್ರಹ್ಮ” ಯಜ್ಞದ ವೀಕ್ಷಕನಾಗಿರುತ್ತಾನೆ.

ಈ ನಾಲ್ಕು ಗಣದ ಋತ್ವಿಜರ ಪರಸ್ಪರ ಸಹಕಾರದಿಂದ ಯಜ್ಞವು ಸಂಪನ್ನವಾಗುತ್ತದೆ. ಅತಿರಾತ್ರವೆಂಬುವುದು ಸೋಮಸಂಸ್ಥೆಗಳಲ್ಲಿ ಆರನೆಯ ಕ್ರತುವಾಗಿದೆ. ಈ ಯಜ್ಞದ ಕ್ರಿಯಾ ಕಲಾಪವು ಸೂರ್ಯೋದಯಕ್ಕೆ ಪ್ರಾರಂಭವಾಗಿ ಮರುದಿನ ಸೂರ್ಯೋದಯದ ನಂತರವೂ ಮುಂದುವರೆಯುವುದರಿಂದ ಅಂದರೆ ರಾತ್ರಿಯನ್ನು ಮೀರಿ ನಡೆಸುವುದರಿಂದ ಇದಕ್ಕೆ ಅತಿರಾತ್ರವೆಂದು ಹೆಸರು. ಈ ಯಜ್ಷ ಪ್ರಕ್ರಿಯೆಯಲ್ಲಿ ಸಾಮಾನ್ಯ ಸೋಮಯಾಗದಂತೆಯೇ ಕ್ರಿಯೆಗಳು ನಡೆದು ರಾತ್ರಿ ಪರ್ಯಾಗಳೆಂಬ 12 ಸ್ತೋತ್ರಗಳೂ, 2 ಶಸ್ತ್ರಗಳೂ ನಡೆಯುತ್ತದೆ. 1300 ಮಂತ್ರಗಳಿರುವ ಅಶ್ವಿನಿ ಸಹಸ್ರವೆಂಬ ಅತೀ ದೊಡ್ಡ ಶಸ್ತ್ರ(ದೇವತೆಗಳನ್ನು ಪ್ರಶಂಸಿಸುವ ಮಂತ್ರ ಸಮೂಹ) ಈ ಯಜ್ಞದಲ್ಲಿ ಬಳಕೆಯಾಗುತ್ತದೆ. ಎಲ್ಲಾ ಯಜ್ಞಗಳ ಪ್ರಾಪ್ತಿ ಈ ಯಜ್ಞದಿಂದ ಉಂಟಾಗುತ್ತದೆ. ಸಸ್ಯ ಸಮೃದ್ಧಿ, ಜಲ ಸಮೃದ್ಧಿ ಎಲ್ಲಾ ಕಡೆ ಶಾಂತಿ ಸೌಖ್ಯೆಗಳು ಈ ಯಜ್ಞಗಳಿಂದ ಉಂಟಾಗುತ್ತದೆ. 70 ಅಡಿ ಅಗಲ, 100 ಅಡಿ ಉದ್ದ ಸುತ್ತಳತೆಯ ಅತೀ ವಿಶಿಷ್ಟವಾದ ಬೃಹತ್ ಯಜ್ಞ ಮಂಟಪದಲ್ಲಿ ನಡೆಸುವ ಈ ಯಾಗದ ಪೂರ್ಣಾಹುತಿ ಬಳಿಕ ಅವಭೃತ ಸ್ನಾನದೊಂದಿಗೆ ಯಜ್ಞ ಸಲಕರಣೆಗಳನ್ನು ಜಲದಲ್ಲಿ ವಿಸರ್ಜಿಸಿ, ಯಜ್ಞ ಮಂಟಪವನ್ನು ಪೂರ್ಣವಾಗಿ ಅಗ್ನಿದೇವನಿಗೆ ಸಮರ್ಪಿಸುವ ಭಕ್ತಿ ಸಾಂದ್ರತೆಯ ಪುಣ್ಯ ಸಂದರ್ಭದಲ್ಲೂ ತಾವೆಲ್ಲರೂ ಸಾಕ್ಷೀಭೂತರಾಗಬೇಕೆಂದು ಸಮಿತಿ ಆಶಿಸಿದೆ.

ಶ್ರೌತ ಯಜ್ಞಗಳನ್ನು ಒಬ್ಬೊಬ್ಬರಿಂದ ಮಾಡಲು ಸಾಧ್ಯವಿಲ್ಲದ ಈ ಕಾಲಘಟ್ಟದಲ್ಲಿ ತಪೋಭೂಮಿಯೂ, ಯಾಗಭೂಮಿಯೂ ಆದ ಕೊಂಡೆಯೂರಿನಲ್ಲಿ “ವಿಶ್ವಜಿತ್ ಅತಿರಾತ್ರ ಸೋಮಯಾಗ”ವನ್ನು “ಅರುಣ ಕೇತುಕ ಚಯನ”ದೊಂದಿಗೆ ನಡೆಸಲು ಉದ್ಧೇಶಿಸಲಾಗಿದೆ. ಸಮಸ್ತ ಜೀವರಾಶಿಗಳಿಗೆ ಸನ್ಮಂಗಳವನ್ನುಂಟು ಮಾಡುವ ಈ ಯಜ್ಞದಲ್ಲಿ ಪ್ರತಿಯೊಬ್ಬ ಭಕ್ತನಿಗೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಜ್ಞವು ಬಹಳ ವಿಸ್ಕøತವಾಗಿ ಅನೇಕ ದಿನಗಳು ನಡೆಯುವುದರಿಂದ ಎಲ್ಲಾ ಭಕ್ತರಿಗೂ ತಮ್ಮ ತಮ್ಮ ಶಕ್ತಿಯನುಸಾರವಾಗಿ ಯಜ್ಞದಲ್ಲಿ ಸೇವೆ ಸಲ್ಲಸಲು ಅವಕಾಶವಿದೆ. ಲೋಕಕಲ್ಯಾಣರ್ಥವಾಗಿ ನಡೆಯಲಿರುವ ಈ ಯಜ್ಞದಿಂದ ಎಲ್ಲರಿಗೂ ಒಳಿತಾಗಲಿ, ರಾಷ್ಟ್ರ ಸುಭೀಕ್ಷವಾಗಲಿ, ಭಯ ನಿವಾರಣೆಯಾಗಲಿ, ಶಾಂತಿ ನೆಲೆಯಾಗಲಿ ಎಂಬ ಸತ್ಸಂಕಲ್ಪದೊಂದಿಗೆ ನಾವೆಲ್ಲರೂ ಕೈಜೋಡಿಸೋಣ, ಯಜ್ಞದ ಫಲವನ್ನು ಪಡೆಯೋಣ. ಲೋಕಹಿತವನ್ನು ಬಯಸೋಣ. ಈ ಅತಿರಾತ್ರ ಸೋಮಯಾಗ ಸಮಸ್ತ ಜೀವಕೋಟಿಗಳ ಅಭ್ಯುದಯಕ್ಕೆ ಕಾರಣವಾಗಲಿದೆ.

ಚೆಕ್ ಡಿ.ಡಿ ಯಾ ಆನ್ ಲೈನ್ ಮೂಲಕ ಧನಸಹಾಯ, ಪೂಜಾ ಸೇವೆಗಳನ್ನು ಮಾಡಿಸುವವರು “ವಿಶ್ವಜಿತ್ ಅತಿರಾತ್ರ ಸೋಮಯಾಗ ಸಮಿತಿ” ಖಾತೆ ಸಂಖ್ಯೆ 204401011003944 ವಿಜಯ ಬ್ಯಾಂಕ್ ಮುಳಿಂಜ ಖಾತೆಗೆ (IFSC CODE:VIJB00020440) ಕಳಿಸಬೇಕಾಗಿ ವಿನಂತಿ.

ಸೇವಾ ವಿವರ
ಸಂಪೂರ್ಣ ಸೋಮಯಾಗ ಸೇವೆ (ಅನ್ನದಾನ ಸಹಿತ)-3 ಲಕ್ಷ
ಸಂಪೂರ್ಣ ಸೋಮಯಾಗ ಸೇವೆ-2 ಲಕ್ಷ
1 ದಿನದ ಸೋಮಯಾಗ ಸೇವೆ (ಅನ್ನದಾನ ಸಹಿತ ಸೇವೆ)-1 ಲಕ್ಷ
1 ದಿನದ ಸೋಮಯಾಗ ಸೇವೆ-50,000
1 ದಿನದ ಅನ್ನದಾನ ಸೇವೆ-50,000
1 ಹೊತ್ತಿನ ಅನ್ನದಾನದ ಸೇವೆ-25,000
ಅರುಣ ಕೇತು ಚಯನ ಸೇವೆ-25,000
ಸೋಮಯಾಗ ಸೇವೆ, ಇಷ್ಟಿ ಸಹಿತ-10,000
ಸೋಮಯಾಗ ಸೇವೆ-1000

ಇದು ಸ್ವಾತಂತ್ರ್ಯಾನಂತರ ನಡೆದ ಅತ್ಯಂತ ವಿರಳ ಯಜ್ಞವಾಗಿದೆ. ಹಾಗೂ ಅತ್ಯಂತ ಶಕ್ತಿಶಾಲಿ ಯಜ್ಞವಾಗಿದೆ. ಈ ಪುಣ್ಯಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

-ಮಹೇಶ್ ವಿಕ್ರಂ ಹೆಗ್ಡೆ, ಸಂಸ್ಥಾಪಕರು, ಪೋಸ್ಟ್ ಕಾರ್ಡ್ ನ್ಯೂಸ್.

 

Edited By

Ramesh

Reported By

Ramesh

Comments