ಕೈ ಅಭ್ಯರ್ಥಿ ಉಗ್ರಪ್ಪ ಚರಾಸ್ತಿ ಮುಟ್ಟುಗೋಲಿಗೆ ದೊಡ್ಡಬಳ್ಳಾಪುರ ಕೋರ್ಟ್ ಆದೇಶ

03 Nov 2018 5:26 AM |
1035 Report

ಬಳ್ಳಾರಿ ಲೋಕಸಭಾ ಉಪಚುನಾವಣಾ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಮನೆಯಲ್ಲಿನ ಗೃಹಬಳಕೆ ವಸ್ತುಗಳನ್ನ ಮುಟ್ಟುಗೋಲು ಹಾಕುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಮೋಟಾರು ಕಾಯ್ದೆ ಅಡಿ ಬಾಲಾಜಿ ಎಂಬವರಿಗೆ ನೀಡಬೇಕಾಗಿದ್ದ ಅಪಘಾತ ಪರಿಹಾರದ ಹಣವನ್ನು ನೀಡದೇ, ಸ್ಥಳೀಯ ನ್ಯಾಯಾಲಯದ ಆದೇಶವನ್ನು ಉಗ್ರಪ್ಪ ಉಲ್ಲಂಘನೆ ಮಾಡಿದ್ದರು. ಇಂದು ಇದರ ಮರು ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ವಿ.ಎಸ್.ಉಗ್ರಪ್ಪಗೆ ಸೇರಿದ ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ. ಈ ಪ್ರಕರಣದಲ್ಲಿ ಪರಿಹಾರ ಹಣ ಪಾವತಿ ಮಾಡುವಂತೆ ಆದೇಶ ನೀಡಿದ್ದರೂ, ಉಗ್ರಪ್ಪ ಯಾವುದೇ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಇಂದು ಚರಾಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದೆ.

ಪ್ರಕರಣ?
2010 ರ ಆಗಸ್ಟ್ 8 ರಂದು ಬೆಂಗಳೂರಿನ ಚಿಕ್ಕಸಂದ್ರ ನಿವಾಸಿ ವ್ಯಾಪಾರಿ ಬಾಲಾಜಿ ಎಂಬವರು ತನ್ನ ಬಜಾಜ್ ಚೇತಕ್ ಸ್ಕೂಟರ್ ನಲ್ಲಿ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಹಿಂಬದಿಯಿಂದ ಬಂದ ಉಗ್ರಪ್ಪ ಮಾಲೀಕತ್ವದ ಕೆಎ 02 ಜೆಡ್ 4499 ನಂಬರಿನ ಟೊಯೋಟಾ ಕ್ವಾಲೀಸ್ ವಾಹನ ಡಿಕ್ಕಿ ಹೊಡೆದಿತ್ತು.  ಘಟನೆಯಲ್ಲಿ ಸವಾರ ಬಾಲಾಜಿ ಗಂಭೀರವಾಗಿ ಗಾಯಗೊಂಡು ಸ್ಕೂಟರ್ ಸಂಪೂರ್ಣ ಜಖಂಗೊಂಡಿತ್ತು.

ಈ ಪ್ರಕರಣ ಸಂಬಂಧ 2012 ರಲ್ಲಿ ಸ್ಕೂಟರ್ ಸವಾರ ಬಾಲಾಜಿ ವಿಶೇಷ ದಾವೆ ಹೂಡಿ ಪರಿಹಾರ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.  ಹೀಗಾಗಿ ಸ್ಕೂಟರ್ ಸವಾರ ಬಾಲಾಜಿಗೆ, 2017ರ ಅಕ್ಟೋಬರ್ 31 ರಂದು ಮೋಟಾರು ವಾಹನ ಕಾಯ್ದೆಯಡಿ 67,500  ರೂ. ಪರಿಹಾರ ಧನ ವಿತರಣೆಗೆ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು.  ಮೊದಲೇ ಕೋರ್ಟ್ ಗೆ ಹಾಜರಾಗದ ಉಗ್ರಪ್ಪ, ದಂಡವನ್ನ ಸಹ ಪಾವತಿಸದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು. ಕೋರ್ಟ್ ಆದೇಶ ವರ್ಷ ಕಳೆದರೂ, ಉಗ್ರಪ್ಪ ಯಾವುದೇ ಪರಿಹಾರದ ಹಣವನ್ನು ನೀಡಿರಲಿಲ್ಲ, ಹೀಗಾಗಿ ಬಾಲಾಜಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.

ಶುಕ್ರವಾರ ಬಾಲಾಜಿಯವರ ಕೇಸ್ ಸಂಖ್ಯೆ 10048/2018 ವಿಚಾರಣೆಗೆ ಬಂದಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ನ್ಯಾ.ಶುಕ್ಲಾಕ್ಷ ಪಾಲನ್ 67,500 ರೂಪಾಯಿ ಪರಿಹಾರ ಹಣಕ್ಕೆ ಬಡ್ಡಿ ಸಹಿತ 94,925 ರೂಪಾಯಿ  ಸೇರಿಸಿ ಉಗ್ರಪ್ಪನವರಿಗೆ ಸೇರಿದ ಮನೆಯಲ್ಲಿನ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಇದೇ ತಿಂಗಳ 12, 13ರೊಳಗೆ ಮುಟ್ಟುಗೋಲು ಹಾಕುವಂತೆ ಸೂಚಿಸಿದ್ದಾರೆ. 

ಮತ್ತೊಬ್ಬರಿಗೆ ಕಾನೂನು ಹಾಗೂ ಸಂವಿಧಾನದ ಪಾಠ ಮಾಡುವ ಉಗ್ರಪ್ಪ ಕಾನೂನನ್ನು ಧಿಕ್ಕರಿಸುವುದು ಯಾಕಪ್ಪಾ?

Edited By

Ramesh

Reported By

Ramesh

Comments