ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ.....

25 Aug 2018 8:25 AM |
695 Report

ನನ್ನ ಆತ್ಮೀಯರ ಮಗಳ ಜೊತೆ ಹಾಗೇ ಹರಟೆ ಹೊಡೆಯುತ್ತಾ ಕುಳಿತಿದ್ದೆ, ಹಾಗೇ ಒಂದು ಸೆಲ್ಫೀ ತೆಗೆದು ಫಾರ್ವರ್ಡ್ ಮಾಡಿದಳು, ಅಂಕಲ್ ನಿಮಗೂ ಫೋಟೋ ಕಳುಹಿಸಿದ್ದೇನೆ ನೋಡಿಕೊಳ್ಳಿ, ಮೊಬೈಲ್ ಓಪನ್ ಮಾಡಿ ಫೋಟೋ ನೋಡಿ ಆಫ್ ಮಾಡಿದೆ, ಅಂಕಲ್... ಮೊಬೈಲ್ ಆನ್ ಮಾಡಿ ಅಂದಳು....ಯಾಕಮ್ಮಾ....? ಸ್ಕ್ರೀನ್ ಸೇವರ್ ನೋಡಬೇಕು ಅಂಕಲ್.....ಆನ್ ಮಾಡಿ ತೋರಿಸಿದೆ...ಓ...ಮೋದಿ! ಮೋದಿನ ಕಂಡರೆ ನನಗೆ ಆಗೋಲ್ಲಾ...ಅಂಕಲ್, ಒಂದು ಕ್ಷಣ ಮೈಂಡ್ ಬ್ಲಾಂಕ್ ಆದ ಅನುಭವ ಇಷ್ಟು ಚಿಕ್ಕ ಹುಡುಗಿಗೆ ಮೋದಿ ಕಂಡರೆ ಆಗೋಲ್ಲವಾ? ಅಷ್ಟಕ್ಕೂ ಮೋದಿ ಕುರಿತು ಈಕೆಗೆ ಗೊತ್ತಿರುವುದಾದರೂ ಏನು? ಪೇಪರ್ ಓದೋಲ್ಲ, ಟಿವಿ ನ್ಯೂಸ್ ನೋಡೋಲ್ಲ.. ಮನೆಯಲ್ಲಿರೋ ಎಲ್ಲರೂ ಮೋದಿ ಅಭಿಮಾನಿಗಳು, ಆದರೂ ಈಕೆ ಮೋದಿ ಕಂಡರೆ ಆಗಲ್ಲ ಅಂತಾಳಲ್ಲ? ನಿಧಾನವಾಗಿ ಯಾಕಮ್ಮಾ ಮೋದಿ ಕಂಡರೆ ಆಗಲ್ಲ?.... ನಮ್ಮ ಮಿಸ್ ಹೇಳಿದರು ಅಂಕಲ್....ಮಿಸ್ಸಾ! ಯಾವ ಮಿಸ್ಸು? ಇಂಗ್ಲಿಷ್ ಪಾಠ ಮಾಡೋ ಮಿಸ್ಸೂ......ಇನ್ನೇನು ಹೇಳಿದ್ದಾರಮ್ಮ ನಿಮ್ಮ ಮಿಸ್ಸು?....ಸಿದ್ದರಾಮಯ್ಯ ಸೂಪರ್....ಮೋದಿ ರ್ಯಾಸ್ಕಲ್ ಅಂತೇ ಅಂಕಲ್....ಅದಕ್ಕೇ ನನಗೆ ಮೋದಿ ಕಂಡರೆ ಆಗೋಲ್ಲಾ.

ಒಂದು ಕ್ಷಣ ಗರಬಡಿದಂತೆ ಕುಳಿತು ಬಿಟ್ಟೆ, ದೇಶಪ್ರೇಮ,ದೇಶಭಕ್ತಿಯನ್ನು ಕೇಳಿ, ತಿಳಿದುಕೊಳ್ಳೋ ವಯಸ್ಸಿನಲ್ಲಿ ದೇಶದ ಪ್ರಧಾನ ಮಂತ್ರಿಯನ್ನು ರ‍್ಯಾಸ್ಕಲ್ ಅಂತಾ ಇದಾಳೆ ಅಂದರೆ ಇದು ಒಂದೆರಡು ದಿನಗಳಲ್ಲಿ ಆಗೋ ಕೆಲಸವಲ್ಲ, ಇಡೀ ಜಗತ್ತೇ ಗೌರವಿಸೋ ವ್ಯಕ್ತಿ ನರೇಂದ್ರ ಮೋದಿ, ಪ್ರಪಂಚದ ಎಷ್ಟೋ ದೇಶಗಳು ಮೋದಿಯವರ ಬರುವಿಕೆಗೆ ಕಾದು ಕುಳಿತಿವೆ, ಅವರ ಮಾತು ಕೇಳಲು ಕಾತುರದಿಂದ ಕಾಯುತ್ತಾರೆ, ದೇಶದ ಅಭಿವೃದ್ಧಿಗಾಗಿ ಹಗಲಿರುಳೂ ದುಡಿಯುತ್ತಿರುವ ಕರ್ಮಯೋಗಿಯ ಬಗ್ಗೆ ಇಲ್ಲ ಸಲ್ಲದ್ದನ್ನು ಮಕ್ಕಳ ತಲೆಯಲ್ಲಿ ತುಂಬುತ್ತಾರೆ ಅಂದರೆ ಯೋಚಿಸಬೇಕಾಗಿರೋ ವಿಷಯ. ನನ್ನಿಬ್ಬರು ಸ್ನೇಹಿತರಿಗೆ ಈ ವಿಷಯ ಹೇಳಿ ಇದಕ್ಕೊಂದು ಪರಿಹಾರ ಯೋಚಿಸಿ ಅಂತಾ ಅವರ ತಲೆಗೆ ಹುಳ ಬಿಟ್ಟೆ.

ವಿಷಯ ಇಲ್ಲಿಗೆ ನಿಲ್ಲಲಿಲ್ಲ....ಕಳೆದವಾರ ಮಾಜಿ ಪ್ರಧಾನಿ ವಾಜಪೇಯಿಯವರು ತೀರಿಕೊಂಡರೆಲ್ಲಾ, ಮಾರನೇ ದಿನ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದೆ, ಅಲ್ಲಿ ಸಿಕ್ಕ ಸ್ನೇಹಿತರು ಸಾರ್, ನೀವು ಹೇಳಿದ್ದು ಸರಿ ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕು, ಯಾಕೆ ಸಾರ್? ಏನಾಯ್ತು? ಈಗ ಬರೋ ದಾರಿಯಲ್ಲಿ ನನ್ನ ಅಕ್ಕನ ಮಗಳು ಸಿಕ್ಕಿದ್ದಳು, ಹಾಗೇ ಮಾತನಾಡುತ್ತಾ ಯಾಕಮ್ಮಾ ಶಾಲೆಗೆ ಹೋಗಲಿಲ್ವಾ ಅಂದೆ, ಅದ್ಯಾರೋ ಪ್ರಧಾನ ಮಂತ್ರಿ ಆಗಿದ್ದೋನು ಸತ್ತೋದ್ನಂತೆ ಮಾಮ ಅದಕ್ಕೇ ರಜಾ....ಅಂದಳು, ಯಾರಮ್ಮಾ ಹೇಳಿದ್ದು? ನೆನ್ನೆ ಮದ್ಯಾನ್ಹ ನಮ್ಮ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ನಮ್ಮ ಮೇಷ್ಟ್ರು ಹೇಳಿದರು ಮಾಮಾ.... ದೆಹಲಿಯಲ್ಲಿ ಪ್ರಧಾನ ಮಂತ್ರಿ ಆಗಿದ್ದೋನು ಸಾಯ್ತಾವ್ನೆ...ಅವನೇನಾದರೂ ಸತ್ತರೆ ನಾಳೆ ಶಾಲೆಗೆ ರಜಾ....ಇಲ್ಲದಿದ್ದರೆ ಇಲ್ಲಾ, ಅವ್ನು ಸತ್ತೋದ್ನಂತೆ ಮಾಮಾ ಅದಕ್ಕೆ ರಜಾ ಕೊಟ್ಟಿದ್ದಾರೆ, [ಸತ್ತವರು ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ!]  ಅವಳು ಕೊಟ್ಟ ಉತ್ತರ ಕೇಳಿ ಷಾಕ್ ಆಯ್ತು ಅಂದರು.

ವಾಜಪೇಯಿಯವರಾಗಲಿ, ಮೋದಿಯವರಾಗಲಿ ಇಬ್ಬರೂ ನಮ್ಮ ದೇಶದ ಅಸಾಮಾನ್ಯ ವ್ಯಕ್ತಿಗಳು, ಇಡೀ ಜಗತ್ತು ಮೆಚ್ಚುವ ನಾಯಕರು, ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟವರು, ಒಬ್ಬರು ವಿಶ್ರಮಿಸಿದರೆ ಇನ್ನೊಬ್ಬರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ,  ಇಂತಹ ವ್ಯಕ್ತಿಗಳ ಬಗ್ಗೆ ಮಕ್ಕಳ ಮುಂದೆ ಕೀಳಾಗಿ ಮಾತನಾಡವಂತವರು ಎಂತಹ ಶಿಕ್ಷಕರು? ಪಾಠ ಯಾವ ರೀತಿ ಮಾಡುತ್ತಾರೆ? ಇಂತವರ ಹತ್ತಿರ ವಿಧ್ಯೆ ಕಲಿತ ಮಕ್ಕಳು ಮುಂದೆ ಏನಾಗುತ್ತಾರೆ?

ಮೇಲೆ ವಿವರಿಸಿರಿಸಿದ ಇಬ್ಬರೂ ಹುಡುಗಿಯರು ಓದುತ್ತಿರುವುದು ಎಂಟನೇ ತರಗತಿ, ಈ ವಯಸ್ಸಿನಲ್ಲಿ ಮಕ್ಕಳು ತಂದೆ ತಾಯಿಯ ಮಾತಿಗಿಂತ ಶಿಕ್ಷಕರ ಮಾತನ್ನು ನಂಬುತ್ತಾರೆ, ಅವರಿಗೆ ಶಾಲೆಗಳಲ್ಲಿ ದೇಶ ಭಕ್ತರು, ಸ್ವಾತಂತ್ರ್ಯಕ್ಕಾಗಿ  ಹೋರಾಡಿದ ನಾಯಕರು, ವೀರ ಯೋಧರ ಬಗ್ಗೆ ತಿಳಿಸಿ ದೇಶ ಪ್ರೇಮಿಗಳನ್ನಾಗಿ ಮಾಡಬೇಕು.  ಆದರೆ ಇಲ್ಲಿ ಆಗುತ್ತಿರುವುದಾದರೂ ಏನು? ಮೊದಲನೆ ಘಟನೆ ವಿವರಿಸಿದ ಶಾಲೆ ಇರುವುದು ನಮ್ಮ ಊರೊಳಗೆ, ಅದೊಂದು ಪ್ರತಿಷ್ಠಿತ? [ಅಂತಾ ತಿಳಿದುಕೊಂಡಿದ್ದೆ] ಖಾಸಗಿ ಶಾಲೆ, ನಗರದ ಗಣ್ಯ ವ್ಯಕ್ತಿ? ಅದರ ಮಾಲಿಕ. ಇನ್ನೊಂದು ಊರ ಹೊರವಲಯದಲ್ಲಿರೋ ಖಾಸಗಿ ಹೈಸ್ಕೂಲ್, ಎರಡರಲ್ಲೂ ವರ್ಷಕ್ಕೆ ಸರಾಸರಿ ಎಂಬತ್ತು ಮಕ್ಕಳು ಹೈಸ್ಕೂಲ್ ಮುಗಿಸಿ ಹೊರಬರುತ್ತಾರೆ, ಈ ಎರಡು ಶಾಲೆಗಳ ಕಥೆ ಹೀಗಾದರೆ, ಇನ್ನು ಉಳಿದ ಖಾಸಗಿ ಶಾಲೆಗಳ ಕಥೆ ಏನು?  ಒಂದು ರಾಜ್ಯದಲ್ಲಿ ಎಷ್ಟು ಶಾಲೆಗಳಿರಬಹುದು? ಇನ್ನುಳಿದ ರಾಜ್ಯಗಳಲ್ಲಿ ಎಷ್ಟಿರಬಹುದು? ಇಂಥ ಶಾಲೆಗಳಿಂದ ಹೊರಬರುವ ಮಕ್ಕಳು ಮುಂದೇನಾಗಬಹುದು? ದೆಹಲಿಯಲ್ಲಿರುವ ಜೆ ಎನ್ ಯೂ ನಲ್ಲಿ ಮಾತ್ರ ಈ ರೀತಿ ಅಂದುಕೊಂಡಿದ್ದರೆ, ನಮ್ಮ ಬುಡದಲ್ಲೇ ಬೆಂಕಿ ಹೊತ್ತಿಕೊಂಡಿದೆಯೆಲ್ಲಾ? ಇದನ್ನು ತಡೆಯುವ ರೀತಿ ಹೇಗೆ?  ಹೀಗೇ ಯೋಚಿಸುತ್ತಾ .....ಈ ಎರಡೂ ಘಟನೆಗಳನ್ನು ನನ್ನ ಇನ್ನೊಬ್ಬ ಮಿತ್ರನಿಗೆ ಫೋನಾಯಿಸಿ ತಿಳಿಸಿದೆ, ಆತ ಕೊಟ್ಟ ಉತ್ತರ ಕೇಳಿ ಮತ್ತಷ್ಟು ಗಾಬರಿ ಆಯಿತು, ಅಯ್ಯೋ ಅಣ್ಣಾ ನೀನಿನ್ನೂ ಹೈಸ್ಕೂಲ್ ನಲ್ಲೇ ಇದ್ದೀಯಾ...ನಮ್ಮ ತಾಲ್ಲೂಕಿನಲ್ಲಿರೋ ಎಲ್ಲಾ ಕಾಲೇಜುಗಳಲ್ಲೂ ಇಂತ ಕಮ್ಮಿನಿಷ್ಠರು ಉಪನ್ಯಾಸಕರ ವೇಷದಲ್ಲಿ ಇದ್ದಾರೆ ಅಂತಾ ನಾಲ್ಕಾರು ಪ್ರಗತಿಪರ ಕಮ್ಮಿನಿಷ್ಠ ಉಪನ್ಯಾಸಕರ ಹೆಸರು ತಿಳಿಸಿದ, ಮುಂದೆ ಮಾತನಾಡಲಿಲ್ಲ.

ಪೋಷಕರೇ..... ಎಚ್ಚರ, ಖಾಸಗಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸುವ ಮುನ್ನ ಒಮ್ಮೆ ಯೋಚಿಸಿ, ಶಾಲೆಯ ಕುರಿತು ಪೂರ್ಣ ವಿವರ ಪಡೆದುಕೊಳ್ಳಿ, ನಡೆಸುವವರು ಯಾರು? ಪಠ್ಯ ಪುಸ್ತಕಗಳು ಯಾವುದು? ಶಿಕ್ಷಕರು ಯಾರು? ಎಲ್ಲಿಂದ ಬಂದಿದ್ದಾರೆ? ಅವರ ಹಿನ್ನಲೆ ಏನು? ಎಲ್ಲ ತಿಳಿದು ನಂತರ ಶಾಲೆಗೆ ಸೇರಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ಮಕ್ಕಳು ಹಾಳಾಗುವುದಲ್ಲದೆ, ಊರು,ರಾಜ್ಯ, ದೇಶವನ್ನೇ ಹಾಳುಮಾಡೋ ದೇಶದ್ರೋಹಿ ಪ್ರಜೆಗಳಾಗುತ್ತಾರೆ.  ಮೇಲೆ ಹೇಳಿದ ಹುಡುಗಿಯರ ಮನೆಯಲ್ಲಾಗಲಿ, ಸುತ್ತ ಮುತ್ತಲಿನಲ್ಲಿರುವವರು, ಮನೆಗೆ ಬಂದು ಹೋಗುವವರು ಎಲ್ಲರೂ ನೂರಕ್ಕೆ ನೂರು ಮೋದಿ ಅಭಿಮಾನಿಗಳು, ಹಾಗಿದ್ದರೂ ಗೊತ್ತಿಲ್ಲದಂತೆ ಆಗುತ್ತಿರುವ ಇಂತಹ ಅನಾಹುತ ತಡೆಗಟ್ಟದಿದ್ದರೆ ದೊಡ್ಡ ತಪ್ಪಾಗುತ್ತದೆ.  ನಿಮ್ಮ ಮನೆಯಲ್ಲಿರುವ ಮಕ್ಕಳನ್ನು ವಿಚಾರಿಸಿ ಕೊಳ್ಳಿ, ಅನುಮಾನ ಬಂದರೆ ಶಾಲೆಗೆ ಹೋಗಿ ನೇರವಾಗಿ ಆ ಶಿಕ್ಷಕರನ್ನೇ ಕೇಳಿ, ಆಡಳಿತ ಮಂಡಲಿಯವರಿಗೆ ದೂರು ನೀಡಿ, ಸಮಾಧಾನವಾಗದೇ ಇದ್ದರೆ ನಿರ್ದಾಕ್ಷಿಣ್ಯವಾಗಿ ಆ ಶಾಲೆ ಬಿಡಿಸಿ ಬೇರೊಂದು ಉತ್ತಮ ಶಾಲೆಗೆ ಸೇರಿಸಿ.  ಪ್ರತೀ ವರ್ಷ ಒಂದು ಲಕ್ಷದವರೆಗೂ ಫೀಸ್ ಕಟ್ಟಿ ನಿಮ್ಮ ಮಕ್ಕಳ ಭವಿಷ್ಯ ನೀವೇ ಹಾಳುಮಾಡಬೇಡಿ.  ಕೇಳಿದಷ್ಟು ಹಣ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಆಗೋಲ್ಲ, ಅಲ್ಲಿ ಏನು ಪಾಠ ಮಾಡುತ್ತಾರೆ ಅಂತ ಗಮನಿಸಬೇಕು. ಇಲ್ಲದಿದ್ದರೆ ನಮ್ಮ ನಿಮ್ಮ ಮನೆಗಳಲ್ಲೂ ಒಬ್ಬ ಕನ್ನಯ್ಯ, ಒಬ್ಬ ಶೀಲಾ ರಶೀದ್ ರಂತವರು ಹುಟ್ಟುವ ದಿನ ದೂರವಿಲ್ಲ. 

ಯಾಕೋ ತಡೆಯಲು ಆಗಲಿಲ್ಲ..... ನಾಲ್ಕಾರು ಸ್ನೇಹಿತರಿಗೆ ಈ ವಿಷಯ ಹೇಳಬೇಕು ಅಂತಾ ಅನ್ನಿಸಿತು ನನಗೆ ತಿಳಿದಂತೆ ಗೀಚಿದ್ದೇನೆ, ಸರಿ ಅನ್ನಿಸಿದರೆ ಶೇರ್ ಮಾಡಿ, ಪರಿಹಾರ ಏನಾದರೂ ಹೊಳೆದರೆ ಕಮೆಂಟ್ ಮಾಡಿ, ಇಲ್ಲದಿದ್ದರೆ ಸುಮ್ಮನಿರಿ.

 

 

Edited By

Ramesh

Reported By

Ramesh

Comments