'ಕಮಲ' ಬಿಟ್ಟು 'ತೆನೆ' ಹೊತ್ತ ನಾಯಕರು..!!

03 Mar 2018 9:33 AM |
8878 Report

ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಅವಹೇಳನಕಾರಿಯಾಗಿ ವರ್ತಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಪುಂಡಾಟಿಕೆಗೆ ಆ ಪಕ್ಷದ ಮುಖಂಡರು ತಕ್ಷಣ ಕಡಿವಾಣ ಹಾಕಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಒತ್ತಾಯಿಸಿದರು.

ಬಿಜೆಪಿ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡ ಗೌರಿಕಾಲುವೆ ಬಡಾವಣೆಯ 50ಕ್ಕೂ ಹೆಚ್ಚು ನಾಯಕರು,ಯುವಕರ ತಂಡವನ್ನು ನಗರದ ಜೆಡಿಎಸ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿಯವರ ಪುತ್ರ, ಮುಖ್ಯಮಂತ್ರಿಗಳಾಗಿದ್ದವರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವವರು ಅವರಿಗೆ ಅವರದೇ ಆದ ಅರ್ಹತೆ ಮತ್ತು ಸ್ಥಾನಮಾನವಿದೆ, ಅಂತಹವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಸಂದೇಶ ಹಾಕುವುದು, ಸಾರ್ವಜನಿವಾಗಿ ಏಕವಚನದಲ್ಲಿ ನಿಂದಿಸುವುದು, ಕುಚೋದ್ಯ, ಅವಮಾನ ಮಾಡುವ ರೀತಿ ವರ್ತಿಸುವುದು ಸರಿಯಲ್ಲ ಎಂದರು. ಯಾವುದೇ ವಿಷಯವನ್ನು ರಾಜಕಾರಣಿಗಳು ರಾಜಕೀಯವಾಗಿ ಎದುರಿಸಬೇಕು ಅದನ್ನು ಬಿಟ್ಟು ಪಟಾಲಂಗಳನ್ನು ಕಟ್ಟಿಕೊಂಡು ಪುಂಡಾಟಿಕೆ ನಡೆಸುವುದು, ಇಲ್ಲದ ಗಾಳಿ ಸುದ್ದಿಗಳನ್ನು ಹಬ್ಬಿಸುವುದು, ಎದುರಾಳಿಗಳ ತೇಜೋವಧೆಯಂತಹ ಮೂರನೇ ದರ್ಜೆಯ ರಾಜಕಾರಣವನ್ನು ಸ್ಥಳೀಯ ಶಾಸಕರು ಬಿಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಪಕ್ಷದಲ್ಲೂ ಕಾರ್ಯಕರ್ತರ ಪಡೆಯಿದೆ, ಅವರಲ್ಲೂ ಬಲವಿದೆ, ಅವರು ಬೀದಿಗಿಳಿದು ಕಾನೂನನ್ನು ಕೈಗೆತ್ತಿಕೊಂಡರೆ ಅನಾಹುತವಾಗುತ್ತದೆ ಎಂಬುದನ್ನು ಬಿಜೆಪಿ ಅರಿಯಬೇಕು, ತನ್ನ ಕಾರ್ಯಕರ್ತರ ಪುಂಡಾಟಿಕೆ ಮತ್ತು ಅತಿರೇಕದ ವರ್ತನೆಯನ್ನು ತಕ್ಷಣ ತಡೆಗಟ್ಟಬೇಕು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಅವಹೇಳನಕಾರಿಯಾಗಿ ವರ್ತಿಸುತ್ತಿರುವವರ ವಿರುದ್ದ ಪೋಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಭ್ಯರ್ಥಿ ಬಿ.ಹೆಚ್.ಹರೀಶ್ ಮಾತನಾಡಿ  ಪಕ್ಷದ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಒಂದೇ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ತೊರೆದು ಸೇರ್ಪಡೆಗೊಂಡ ಗೌರಿಕಾಲುವೆ ಬಡಾವಣೆಯ ಯವಕರನ್ನು ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯಿತು. ಪಕ್ಷದ ಮುಖಂಡರಾದ ಭೈರೇಗೌಡ, ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್, ನಿಸಾರ್ ಅಹಮದ್, ಚಿದಾನಂದ್, ಕ್ವಾಜಾ ಮೊಹಿಯುದ್ದೀನ್, ಅಯೂಬ್ ಖಾನ್, ಸಿ.ಕೆ.ಮೂರ್ತಿ, ಜಯಂತಿ, ಸುಲೋಚನ, ದೇವರಾಜ್ ಅರಸ್, ಸಿ.ಎನ್, ಜಯರಾಜ್ ಅರಸ್, ಮುಸ್ತಾಕ್, ಐ.ಡಿ.ಚಂದ್ರಶೇಖರ್ ಉಪಸ್ಥಿತರಿದ್ದರು.

Edited By

Shruthi G

Reported By

hdk fans

Comments