ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

15 Jul 2017 4:12 PM | Sports
588 Report

ಕೋಲ್ಕತಾ : ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಂಚಿನ ಪ್ರತಿಮೆಯ ಅನಾವರಣ ಜುಲೈ 15ರಂದು ನಗರದಲ್ಲಿ ಶನಿವಾರ ನೆರವೇರಿತು. ಸರಳ ಸಮಾರಂಭದಲ್ಲಿ ಸೌರವ್ ಗಂಗೂಲಿ ಅವರೇ ಪ್ರತಿಮೆಯನ್ನು ಅನಾವರಣಗೊಳಿಸಿದರು.'ಸೌತ್ ದಿನಾಜ್ಪುರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್' ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಈ ಪ್ರತಿಮೆಯ ಎತ್ತರ ಸುಮಾರು 80 ಅಡಿ ಉದ್ದವಿದೆ.

ಸಮಾರಂಭದಲ್ಲಿ ಮಾತನಾಡಿದ, ಸೌತ್ ದಿನಾಜ್ಪುರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಸಂಸ್ಥೆಯ ಕಾರ್ಯದರ್ಶಿ ಗೌತಮ್ ಗೋಸ್ವಾಮಿ, ''ಸೌರವ್ ಗಂಗೂಲಿ ಅವರು ಕೇವಲ ಬಂಗಾಳದ ಕಣ್ಮಣಿಯಲ್ಲ. ಅವರು ವಿಶ್ವದ ಪ್ರತಿಯೊಬ್ಬ ಮಾನವನಿಗೆ ಸ್ಫೂರ್ತಿಯ ಚಿಲುಮೆ. ಅವರಲ್ಲಿನ ಶ್ರದ್ಧೆ, ಪ್ರಮಾಣಿಕತೆ ಹಾಗೂ ಕ್ರಿಕೆಟ್ ಬಗ್ಗೆ ಅವರಿಗೆ ಇರುವ ತುಡಿತದಿಂದಲೇ ಅವರು ತಮ್ಮ ಹಾದಿಯ ಅಡೆತಡೆಗಳನ್ನು ದಾಟಿ ಭಾರತೀಯ ಕ್ರಿಕೆಟ್ ನಲ್ಲಿ ಕಂಗೊಳಿಸಿದ್ದಾರೆ'' ಎಂದು ಹಾಡಿ ಹೊಗಳಿಸಿದರು.

ಸದ್ಯಕ್ಕೆ ಜೀವಂತವಾಗಿರುವ ಯಾವುದೇ ಭಾರತೀಯ ಕ್ರಿಕೆಟ್ ತಾರೆಗಳ ಪ್ರತಿಮೆಯನ್ನು ಭಾರತದಲ್ಲಿ ಎಲ್ಲೂ ನಿಲ್ಲಿಸಿಲ್ಲ ಎಂದ ಅವರು, ಜೀವಂತವಾಗಿರುವಾಗಲೇ ತಮ್ಮದೊಂದು ಪ್ರತಿಮೆಯನ್ನು ಕಾಣುವ ಏಕೈಕ ಅದೃಷ್ಟವಂತ ಕ್ರಿಕೆಟಿಗನಾಗಿ ಸೌರವ್ ಹೊರಹೊಮ್ಮಿದ್ದಾರೆ ಎಂದರು. ಅತ್ತ, ಟ್ವೀಟರ್ ನಲ್ಲಿ ತಮ್ಮ ಪ್ರತಿಮೆ ಅನಾವರಣದ ಫೋಟೋವೊಂದನ್ನು ಸೌರವ್ ಗಂಗೂಲಿ ಹಾಕಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

Edited By

Shruthi G

Reported By

Shruthi G

Comments