ಅಕ್ರಮ ಹೋರ್ಡಿಂಗ್ ಪ್ರಕರಣ: ಡಿ ಕೆ ಶಿ ವಿರುದ್ಧ ಎಫ್ ಐ ಆರ್
ಅಕ್ರಮ ಹೋರ್ಡಿಂಗ್ ತೆರವುಗೊಳಿಸದ ಹಿನ್ನೆಲೆಯಲ್ಲಿ ಡಿ ಕೆ ಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ತೊಂದರೆಗೆ ಸಿಲುಕಿರುವ ಜಲ ಸಂಪನ್ಮೂಲ ಸಚಿವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಜಾಹೀರಾತು ಫಲಕ ಅಳವಡಿಸಲು ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಹೊರ್ಡಿಂಗ್ ಹಾಗೂ ಫ್ಲೆಕ್ಸ್ ಗಳಿಂದ ನಗರದ ಸೌಂಧರ್ಯಕ್ಕೆ ಧಕ್ಕೆಯಾಗುತ್ತಿದ್ದು, ಅನಧಿಕೃತ ಫ್ಲೆಕ್ಸ್ ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಆದೇಶಾನುಸಾರ ಬೆಂಗಳೂರು ನಗರದಲ್ಲಿ ಅನಧಿಕೃತ ಜಾಹೀರಾತು, ಫ್ಲೆಕ್ಸ್ ಗಳನ್ನು ಬಿಬಿಎಂಪಿ ನಿಷೇಧಿಸಿತ್ತು. ನಿಷೇಧದ ನಂತರವೂ ಮೈಸೂರು ರಸ್ತೆಯ ಪಂತಪಾಳ್ಯದ ಬಳಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಜಾಗದಲ್ಲಿದ್ದ ಜಾಹೀರಾತು ಫಲಕದ ಲೋಹದ ಚೌಕಟ್ಟನ್ನು ತೆರವುಗೊಳಿಸಿರಲಿಲ್ಲ. ಹೀಗಾಗಿ ಆರ್ ಆರ್ ನಗರ ಉಪ ವಿಭಾಗ ಸಹಾಯಕ ಕಂದಾಯ ಅಧಿಕಾರಿ ಮುತ್ತು ರಾಜ್ ಅವರು ಸೆಪ್ಟೆಂಬರ್ 24ರಂದು ಸಚಿವರ ವಿರುದ್ಧ ದೂರು ನೀಡಿದ್ದರು. ಕಂದಾಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಸಚಿವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಬ್ಯಾಟರಾಯನಪುರ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Comments