120 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್

09 Mar 2018 3:26 PM | Politics
774 Report

ಸದ್ಯಕ್ಕೆ ಬಿಜೆಪಿ 120 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಈ ಪಟ್ಟಿ ದೆಹಲಿಯ ಕೇಂದ್ರ ಚುನಾವಣಾ ಸಮಿತಿಯ ಪರಿಶೀಲನೆಗೊಳಪಡಲಿದೆ. 120 ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು , 2013ರ ವಿಧಾನಸಭಾ ಚುನಾವಣೆಯಲ್ಲಿ 5-10 ಸಾವಿರ ಮತಗಳ ಅಂತರದಿಂದ ಪರಾಭವಗೊಂಡವರಿಗೂ ಟಿಕೆಟ್ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಹಾಲಿ ಲೋಕಸಭಾ ಸದಸ್ಯರ ಪೈಕಿ ಶಿವಮೊಗ್ಗ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಸದ್ಯಕ್ಕೆ ಟಿಕೆಟ್ ನೀಡಲಾಗಿದೆ. ಬಳ್ಳಾರಿ ಸಂಸದ ಹಾಗೂ ಹಿಂದುಳಿದ ವರ್ಗಗಳ ನಾಯಕ ಶ್ರೀರಾಮುಲುಗೆ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಕೇಂದ್ರ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ. ಉಳಿದಂತೆ ಇನ್ಯಾವ ಲೋಕಸಭಾ ಸದಸ್ಯರಿಗೆ ಟಕೆಟ್ ನೀಡದಿರಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ 2-3 ಕ್ಷೇತ್ರಗಳ ಉಸ್ತುವಾರಿ ಪಡೆದು ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಬೇಕು. ಸುಮಾರು 2-3 ಸಮೀಕ್ಷಾ ವರದಿಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಪ್ರದೇಶವಾರು, ಜಾತಿ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ವರಿಷ್ಠರು ನೀಡಿರುವ ಪಕ್ಷದ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಎಷ್ಟು ಬಾರಿ ಪ್ರತಿಭಟನೆ ನಡೆಸಲಾಗಿದೆ, ಮತದಾರರ ಜೊತೆ ಹೊಂದಿರುವ ಬಾಂಧವ್ಯ ಸೇರಿದಂತೆ ಹತ್ತು ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ನೀಡಿದ ವರದಿ ಆಧರಿಸಿ ಬೆಂಗಳೂರು ಮಹಾನಗರ, ಕರಾವಳಿ ತೀರಾ ಪ್ರದೇಶ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ವ್ಯಾಪ್ತಿಯ 120 ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಅಖೈರು ಮಾಡಲಾಗಿದೆ. ಇದೀಗ ಈ ಪಟ್ಟಿ ದೆಹಲಿ ವರಿಷ್ಠರಿಗೆ ತಲುಪಲಿದೆ. ಚುನಾವಣಾ ಸಮಿತಿ ಅಂತಿಮ ಮುದ್ರೆ ಒತ್ತಿದರೆ ರಾಷ್ಟ್ರಾಧ್ಯಕ್ಷರ ಸೂಚನೆಯಂತೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.

ಬೆಂಗಳೂರು ಮಹಾನಗರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ : 
ಮಲ್ಲೇಶ್ವರಂ-ಅಶ್ವಥ್ ನಾರಾಯಣ, ರಾಜಾಜಿನಗರ- ಎಸ್.ಸುರೇಶ್‍ಕುಮಾರ್, ಪದ್ಮನಾಭನಗರ- ಆರ್.ಅಶೋಕ್, ಜಯನಗರ-ವಿಜಯಕುಮಾರ್, ಬಸವನಗುಡಿ- ರವಿಸುಬ್ರಹ್ಮಣ್ಯ,ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ, ಯಲಹಂಕ -ಎಸ್.ಆರ್‍ವಿಶ್ವನಾಥ್, ದಾಸರಹಳ್ಳಿ- ವಿ.ಮುನಿರಾಜು, ಮಹದೇವಪುರ- ಅರವಿಂದ ಲಿಂಬಾವಳಿ, ಹೆಬ್ಬಾಳ-ವೈ.ಎ.ನಾರಾಯಣಸ್ವಾಮಿ,ಸರ್.ಸಿ.ವಿ.ರಾಮನ್‍ನಗರ- ಸಿ.ರಘು, 
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ, ರಾಜರಾಜೇಶ್ವರಿನಗರ -ಶಿಲ್ಪಾ ಗಣೇಶ್/ಮುನಿರಾಜು, ಮಹಾಲಕ್ಷ್ಮಿಲೇಔಟ್-ಎಸ್.ಹರೀಶ್/ಎಂ.ನಾಗರಾಜ್, ಸರ್ವಜ್ಞನಗರ-ಪದ್ಮನಾಭರೆಡ್ಡಿ /ಶರವಣ, ಗೋವಿಂದರಾಜನಗರ-ಶಾಂತಕುಮಾರಿ /ಉಮೇಶ್ ಶೆಟ್ಟಿ, ವಿಜಯನಗರ-ಅಶ್ವಥನಾರಾಯಣ ಗೌಡ/ರವೀಂದ್ರ, ಚಾಮರಾಜಪೇಟೆ-ಲಹರಿ ವೇಲು/ಬಿ.ವಿ.ಗಣೇಶ್/ಲಕ್ಷ್ಮಿನಾರಾಯಣ, ಆನೇಕಲ್-ಎ.ನಾರಾಯಣಸ್ವಾಮಿ/ಕೆ.ಶಿವರಾಂ, ಬಿಟಿಎಂ ಲೇಔಟ್-ವಿವೇಕ್ ರೆಡ್ಡಿ/ಪ್ರಸಾದ್ ರೆಡ್ಡಿ, ಪುಲಿಕೇಶಿನಗರ- ಸಿ.ಮುನಿಕೃಷ್ಣ, ಶಾಂತಿನಗರ -ವಾಸುದೇವ ಮೂರ್ತಿ/ಶ್ರೀಧರ್ ರೆಡ್ಡಿ, ಕೆ.ಆರ್.ಪುರಂ-ನಂದೀಶ್ ರೆಡ್ಡಿ /ಪೂರ್ಣಿಮಾ, ಗಾಂಧಿನಗರ-ಎಂ.ಬಿ.ಶಿವಪ್ಪ /ಶಿವಕುಮಾರ್, ಚಿಕ್ಕಪೇಟೆ- ಡಾ.ಹೇಮಚಂದ್ರ ಸಾಗರ್, ಉದಯ ಗರುಡಾಚಾರ್/ಕೆಂಪೇಗೌಡ, ಶಿವಾಜಿನಗರ-ಕಟ್ಟಾಸುಬ್ರಹ್ಮಣ್ಯ ನಾಯ್ಡು/ನಿರ್ಮಲಕುಮಾರ್ ಸುರಾನ, ಬ್ಯಾಟರಾಯನಪುರ- ಮುನೀಂದ್ರ ಕುಮಾರ್/ರವಿ.

Edited By

Shruthi G

Reported By

Shruthi G

Comments