ಜೆಡಿಎಸ್ ಶಕ್ತಿ ಪ್ರದರ್ಶನದ ವೇದಿಕೆ ಕಂಡು ನಿಬ್ಬೆರಗಾದ ಬಿಜೆಪಿ, ಕಾಂಗ್ರೆಸ್..!!

16 Feb 2018 12:59 PM | Politics
21614 Report

ಜೆಡಿಎಸ್ ಪಕ್ಷ ಎಲ್ಲೆಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿದೆ ಅಲ್ಲೆಲ್ಲ ಜನಸಾಗರವೇ ಹರಿದು ಬರುತ್ತಿದೆ. ಜೆಡಿಎಸ್ ನ ಹವಾ ಕರ್ನಾಟಕದ ತುಂಬೆಲ್ಲ ಹರಡುತ್ತಿದೆ. ಇತ್ತೀಚೆಗೆ ಯುವಕರೆಲ್ಲ ಜೆಡಿಎಸ್ ನ್ನು ಬೆಂಬಲಿಸುವುದು ಹಾಗೂ ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಸಂಖ್ಯೆ ಹೆಚ್ಚಿದೆ.

ನಾಳೆಯೂ ಸಹ ಉತ್ತರ ಕರ್ನಾಟಕ ಭಾಗದ ಸಾವಿರಾರು ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್‍ಸಿಪಿಯ ಮುಖಂಡರು ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಬದಲಿಗೆ ಪೂರ್ಣಪ್ರಮಾಣದಲ್ಲಿ ಅಧಿಕಾರ ಹಿಡಿಯಲು ಮುಂದಾಗಿರುವ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಪಿಜಿಆರ್ ಸಿಂಧ್ಯಾ, ಎಚ್.ಡಿ.ರೇವಣ್ಣ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ. ನಾಳೆ ಮಧ್ಯಾಹ್ನ ಸಮಾವೇಶ ನಡೆಯಲಿದ್ದು, ಜೆಡಿಎಸ್ ಈ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈಗಾಗಲೇ ಬಿಎಸ್‍ಪಿ ಹಾಗೂ ಎನ್‍ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಸಮಾವೇಶಕ್ಕೆ ಮಾಯಾವತಿ ಅವರನ್ನು ಆಹ್ವಾನಿಸಿದ್ದು, ಅವರು ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಪಕ್ಷ ಸಂಘಟನೆಗೆ ಪಣ ತೊಟ್ಟಿರುವ ಜೆಡಿಎಸ್ ನಾಳಿನ ಸಮಾವೇಶದಲ್ಲಿ ಯುವಜನರ ಸಮಸ್ಯೆಗಳು, ಕಾವೇರಿ, ಮಹದಾಯಿ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಸೂಕ್ತ ನಿರ್ಧಾರ ತಳೆಯಬೇಕಾದರೆ ಪೂರ್ಣ ಪ್ರಮಾಣದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಬೆಂಬಲಿಸುವಂತೆ ಕೋರಲಾಗಿದೆ. ಕಳೆದ ಬಾರಿ ಬಿಜೆಪಿಯವರು ಪ್ರಧಾನಿಯವರ ಕಾರ್ಯಕ್ರಮದಲ್ಲಿ 2 ಲಕ್ಷ ಮಂದಿ ಸೇರುತ್ತಾರೆ ಎನ್ನುತ್ತಿದ್ದರು. ಅದಕ್ಕೂ ಮೀರಿ ಜೆಡಿಎಸ್ ಸಮಾವೇಶದಲ್ಲಿ ಹತ್ತು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಜೆಡಿಎಸ್‍ನ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು, ಅಭಿಮಾನಿಗಳು, ಸೇರಿದಂತೆ ಎಲ್ಲರೂ ಒಗ್ಗೂಡಿ ಸೂಕ್ತ ತಯಾರಿ ಕೈಗೊಂಡಿದ್ದಾರೆ.

 

Edited By

Shruthi G

Reported By

Madhu shree

Comments