ಕಾಂಗ್ರೆಸ್‌ ಭಿನ್ನಮತದಿಂದ ಮತ್ತೊಂದು ಪ್ರಭಾವಿ ವಿಕೆಟ್ ಜೆಡಿಎಸ್ ಪಾಲು..!!

14 Feb 2018 6:44 PM | Politics
15644 Report

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಅಲೆ ಎದ್ದಿದೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪ ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದು ಬೆಂಗಳೂರಿಗೆ ವಲಸೆ ಬರಲು ನಿರ್ಧರಿಸಿದ್ದಾರೆ. ಇದಕ್ಕೆ ಸಿಎಂ ಸಮ್ಮತಿ ನೀಡಿದ್ದು ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದ್ದಾರೆ.

ಹೆಚ್.ಸಿ.ಮಹದೇವಪ್ಪ ವಲಸೆಗೆ ಸಿ.ವಿ. ರಾಮನ್ ನಗರ ಟಿಕೆಟ್ ಆಕಾಂಕ್ಷಿಯಾಗಿರುವ ಸ್ಥಳೀಯ ಕಾಂಗ್ರೆಸ್ ನಾಯಕ ಪಿ. ರಮೇಶ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ನಾಲ್ಕೂವರೆ ವರ್ಷದಿಂದ ಓಡಾಡಿ ಪಕ್ಷ ಸಂಘಟಿಸಿದ್ದೇನೆ. ಚುನಾವಣೆಗೆ ನಿಲ್ಲಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ.ಜೊತೆಗೆ ಸಿ.ವಿ. ರಾಮನ್ ನಗರದಲ್ಲಿ ಗೂಂಡಾಗಿರಿ ಆರಂಭವಾಗಿದೆ. ಸಚಿವ ಮಹದೇವಪ್ಪ ಕ್ಷೇತ್ರಕ್ಕೆ ಬಂದ ನಂತರ ಗೂಂಡಾಗಿರಿ ಆರಂಭಗೊಂಡಿದೆ. ಇದಕ್ಕೆ ಸಚಿವ ಜಾರ್ಜ್ ಹಾಗೂ ಪೊಲೀಸರ ಬೆಂಬಲವೂ ಇದೆ. ನನ್ನ ಮೇಲೆಯೂ ಹಲ್ಲೆ ಯತ್ನ ನಡೆದಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಸ್ವಪಕ್ಷೀಯ ಮುಖಂಡನಿಂದಲೇ ಸಚಿವರ ವಿರುದ್ಧ ಗುರುತರ ಆರೋಪ ಕೇಳಿಬಂದಿರುವುದು 'ಕೈ' ಪಾಳಯದಲ್ಲಿ ತಲ್ಲಣ ಸೃಷ್ಠಿಸಿದೆ.ರಮೇಶ್ ಅವರು ಜೆಡಿಎಸ್ ನತ್ತ ಮುಖ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಅವರೇ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಜೆಡಿಎಸ್‌ನಿಂದ ಕಣಕ್ಕಿಳಿಯುವಂತೆ ತಿಳಿಸಿದ್ದರು ಎಂದು ರಮೇಶ್ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ ಚುನಾವಣಾ ದಿನಾಂಕ ಪ್ರಕಟಕ್ಕೂ ಮೊದಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಭಿನ್ನಮತ, ಬಂಡಾಯದ ಬಿಸಿ ತಟ್ಟಿದ್ದು, 'ಕೈ' ನಾಯಕರು ಇದನ್ನು ಹೇಗೆ ಶಮನ ಮಾಡಲಿದ್ದಾರೆ ಕಾದು ನೋಡಬೇಕು.

 

 

Edited By

Shruthi G

Reported By

Shruthi G

Comments