ಮೋದಿ ಸರಕಾರವನ್ನು ಮಟ್ಟಹಾಕಲು ಸೋನಿಯಾ ಗಾಂಧಿ ರಣತಂತ್ರ

09 Feb 2018 11:52 AM | Politics
446 Report

ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕಿದ್ದರೆ, ಸಹಿಷ್ಣುತೆ ಮರುಕಳಿಸಬೇಕಿದ್ದರೆ, ಎಲ್ಲರನ್ನು ಒಳಗೊಂಡ ಜಾತ್ಯತೀಯ ಸಮಾಜ ನಿರ್ಮಾಣವಾಗಬೇಕಿದ್ದರೆ, ದೇಶ ಆರ್ಥಿಕ ಪ್ರಗತಿಯತ್ತ ಸಾಗಬೇಕಿದ್ದರೆ ಭಾರತೀಯ ಜನತಾ ಪಕ್ಷ ಸೋಲಲೇಬೇಕು" ಎಂದು ಸೋನಿಯಾ ಗಾಂಧಿ ಸಾರಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರು ಪಕ್ಷವನ್ನು ಉದ್ದೇಶಿಸಿ, 2019ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸದೆಬಡಿಯಬೇಕಿದ್ದರೆ, ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟವನ್ನು ಹುಟ್ಟುಹಾಕಬೇಕು ಎಂದು ನಾಯಕರಿಗೆ ಸ್ಪಷ್ಟ ಸೂಟನೆಯನ್ನು ನೀಡಿದ್ದಾರೆ. ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಹೊರಬಿದ್ದ ರಾಜಸ್ತಾನ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸಿರುವುದು ಸ್ಪಷ್ಟವಾಗಿದೆ. ಬಿಜೆಪಿಯನ್ನು ಮಟ್ಟಹಾಕಬೇಕಿದ್ದರೆ ಎಲ್ಲ ವಿರೋಧ ಪಕ್ಷಗಳು ಒಂದಾಗಲೇಬೇಕು ಎಂದು ಅವರು ನುಡಿದರು. ಸಂಸತ್ತಿನಲ್ಲಿ ನೂರಾಐವತ್ತು ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ್ದ ನರೇಂದ್ರ ಮೋದಿಯವರು, ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ನಾಯಕರೂ ಸ್ಥಾಪಿಸಿಲ್ಲ. ಅದು 12ನೇ ಶತಮಾನದಲ್ಲಿ ಕರ್ನಾಟಕದ ಕ್ರಾಂತಿಯೋಗಿ ಬಸವಣ್ಣನವರೇ ಆರಂಭಿಸಿದ್ದು ಎಂದು ಚಪ್ಪಾಳೆ ಗಿಟ್ಟಿಸಿದ್ದರು.

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪ್ರಭುತ್ವ ಮೆರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ನರೇಂದ್ರ ಮೋದಿಯವರ ನಾಡಿನಲ್ಲಿ, ಕಳೆದ 20 ವರ್ಷಗಳಲ್ಲಿಯೇ ಕಾಂಗ್ರೆಸ್ ಮತ್ತು ಅಂಗಪಕ್ಷಗಳು ಅತ್ಯುತ್ತಮ ಸಾಧನೆ ತೋರಿದ್ದು, 182 ಸ್ಥಾನಗಳಲ್ಲಿ 80 ಸ್ಥಾನಗಳನ್ನು ಕಬಳಿಸಿದೆ. ಅಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ರಾಜಸ್ತಾನದಲ್ಲಿ ಎರಡು ಲೋಕಸಭೆ ಮತ್ತು ಒಂದು ವಿಧಾನಸಭೆ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಂದಿನ ವರ್ಷ ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ನರೇಂದ್ರ ಮೋದಿ ಸರಕಾರದ ವೈಫಲ್ಯಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವುದಲ್ಲದೆ, ನಮ್ಮ ಪಕ್ಷದಲ್ಲಿಯೂ ಧನಾತ್ಮಕ ಮತ್ತು ನಂಬಿಕಾರ್ಹ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಅಲ್ಲದೆ, ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಿದೆ. 2004ರಂತೆ ಅವಧಿಗಿಂತ ಮೊದಲೇ ಲೋಕಸಭೆ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ ಎಂದು ಸೋನಿಯಾ ನುಡಿದರು. ಅತಿಯಾದ ದುರಂಕಾರ ಮತ್ತು ಅಪ್ರಾಮಾಣಿಕತೆಯಿಂದಾಗಿ ನರೇಂದ್ರ ಮೋದಿ ಸರಕಾರ, ಸತ್ಯದ ಮೇಲೆ ಸುಳ್ಳಿನ ಸವಾರಿ ಮಾಡುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ವೇದ್ಯವಾಗಿದೆ ಎಂದು ಸೋನಿಯಾ ಗಾಂಧಿಯವರು ಆಕ್ರೋಶವನ್ನು ಹೊರಹಾಕಿದರು. ಮೋದಿಯವರು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ಬರೀ ಭಾಷಣ ಬಿಗಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದ್ದರು.

 

 

 

 

 

 

 

Edited By

Shruthi G

Reported By

Madhu shree

Comments