ಪಾಂಡವಪುರದಲ್ಲಿ ಬಿಜೆಪಿ, ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ತಯಾರಿ..!

09 Feb 2018 10:37 AM | Politics
2465 Report

ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಂಗೇರುತ್ತಿರುವ ರಾಜಕಾರಣ. ಪ್ರತಿ ಪಕ್ಷಗಳನ್ನು ಮಣ್ಣು ಮುಕ್ಕಿಸಲು ತಂತ್ರ ರೂಪಿಸುತ್ತಿರುವ ಪಕ್ಷಗಳು. ಬಿಜೆಪಿಯ ಪರಿವರ್ತನಾ ಯಾತ್ರೆ ಮತ್ತು ಕಾಂಗ್ರೆಸ್ ನ ಸಾಧನಾ ಸಮಾವೇಶಗಳನ್ನು ಮರೆಸುವಂತೆ ಕುಮಾರಸ್ವಾಮಿಯವರ ಕುಮಾರಪರ್ವ ಕರ್ನಾಟಕ ಚುನಾವಣೆಯಲ್ಲಿ ಹೊಸ ಅಲೆ ಎಬ್ಬಿಸಲಿದೆ.

ಕುಮಾರಪರ್ವ ಬೃಹತ್ ಸಮಾವೇಶದಲ್ಲಿ ಸುಮಾರು 500 ಮಂದಿ ಗಣ್ಯರು ಕುಳಿತುಕೊಳ್ಳುವಷ್ಟು ಬೃಹತ್ ವೇದಿಕೆಯನ್ನು ಸಿದ್ದಗೊಳಿಸಲಾಗುತ್ತಿದೆ. ಇನ್ನು ಕಾರ್ಯಕ್ರಮವನ್ನು ಕುಳಿತು ವೀಕ್ಷಣೆ ಮಾಡುವುದಕ್ಕಾಗಿ ಕ್ರೀಡಾಂಗಣದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಪಾಂಡವಪುರದಲ್ಲಿ ಬೃಹತ್ ವೇದಿಕೆಯನ್ನು ಸಜ್ಜು ಗೊಳಿಸುತ್ತಿರುವ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ನಡೆಸಲಿದೆ. ರಾಷ್ಟ್ರೀಯ ಪಕ್ಷಗನ್ನು ಮಣ್ಣು ಮಿಕ್ಕಿಸಲೆಂದು ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಇಂದು(ಫೆ.9) ಸಂಜೆ 4ಕ್ಕೆ ಕುಮಾರಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಹಿಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಸಲ್ಲಿಸಿ ಬಳಿಕ ಸಿ.ಎಸ್.ಪುಟ್ಟರಾಜು ಸೇರಿದಂತೆ ಪಕ್ಷದ ಹಲವು ಗಣ್ಯರೊಡನೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಪಾಂಡವಪುರ ಪಟ್ಟಣಕ್ಕೆ ಆಗಮಿಸಲಿದ್ದಾರೆ.ಈಗಾಗಲೇ ಪಾಂಡವಪುರ ಪಟ್ಟಣದಾದ್ಯಂತ ಜೆಡಿಎಸ್ ನ ಬಾವುಟ, ಫೆಕ್ಸ್, ಬ್ಯಾನರ್ ಗಳಿಂದ ಇಡೀ ಪಟ್ಟಣ ಜೆಡಿಎಸ್ ಮಯವಾಗಿದೆ.

ಕುಮಾರಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಎಚ್.ವಿಶ್ವನಾಥ್, ಬಂಡಪ್ಪಕಾಶಂಪೂರ್, ಫಾರೋಕ್, ಬಸವರಾಜುಹೊರಟಿ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಮಧುಬಂಗಾರಪ್ಪ, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ನಾರಾಯಣಗೌಡ, ಜಫ್ರುಲ್ಲಖಾನ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಅನ್ನದಾನಿ, ಸುರೇಗೌಡ, ಶಿವರಾಮೇಗೌಡ, ಜಿ.ಬಿ.ಶಿವಕುಮಾರ್, ಪ್ರಭಾವತಿ ಜಯರಾಮ್, ಬಿ.ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಧರ್ಮರಾಜು, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲ, ಅನುಸೂಯ, ತಾಪಂ ಅಧ್ಯಕ್ಷೆ ಪೂರ್ಣಿಮಾ, ಪುರಸಭೆ ಅಧ್ಯಕ್ಷೆ ತಾಯಮ್ಮ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಒಟ್ಟಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಕುಮಾರಪರ್ವದ ಮೂಲಕ ಸೆಡ್ಡು ಹೊಡೆಯಲು ತಯಾರಿ ನಡೆಸಿರುವುದು ಎದ್ದು ಕಾಣುತ್ತಿದೆ.

Edited By

Shruthi G

Reported By

Madhu shree

Comments