ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

05 Feb 2018 2:29 PM | Politics
359 Report

'ನಮ್ಮ ಸರಕಾರದ ಬಗ್ಗೆ ಆಧಾರರಹಿತ,ಬೇಜವಾಬ್ದಾರಿತನ ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಅವರು ಬಿಎಸ್ ಯಡಿಯೂರಪ್ಪ ಪರಿವರ್ತನಾ ರ್ಯಾಲಿಯಲ್ಲಿ ಹೇಳಿರುವ ಮಾತುಗಳನ್ನು ಪುನರಾವರ್ತಿಸಿದ್ದಾರೆ. ದೇಶದ ಪ್ರಧಾನಿಯಾಗಿ ಮಾತನಾಡಲಿಲ್ಲ. ಬಿಜೆಪಿ ರಾಜ್ಯದಲ್ಲಿ 5 ವರ್ಷ ಅಧಿಕಾರದಲ್ಲಿದ್ದಾಗ ಎಷ್ಟು ಲೂಟಿ ಮಾಡಿದೆ, ಏನು ಸಾಧನೆ ಮಾಡಿದೆ ಎಂದು ವೇದಿಕೆಯಲ್ಲಿ ಪಕ್ಕದಲ್ಲೇ ಕುಳಿತ್ತಿದ್ದ ಯಡಿಯೂರಪ್ಪರನ್ನು ಕೇಳಬೇಕಿತ್ತು. ಆಗ ಎಲ್ಲವೂ ಗೊತ್ತಾಗುತ್ತಿತ್ತು. ಅದನ್ನು ಬಿಟ್ಟು ನಮ್ಮ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಹೋಗಿದ್ದಾರೆ'' ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.

''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸುವವರು ದೇಶದಲ್ಲಿ ಅಪರಾಧ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜ್ಯಗಳತ್ತ ದೃಷ್ಟಿಹರಿಸಬೇಕಿತ್ತು. ಪಟ್ಟಿಯಲ್ಲಿ ಬಿಜೆಪಿ ಸರಕಾರವಿರುವ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರ ಆ ಬಳಿಕದ ಸ್ಥಾನದಲ್ಲಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ಹೂಡಿಕೆಯಲ್ಲಿ ಸತತ ಎರಡು ವರ್ಷ ನಮ್ಮ ರಾಜ್ಯ ನಂ.1 ಸ್ಥಾನ ಪಡೆಯಲು ಸಾಧ್ಯವಾಗುತ್ತಿತ್ತಾ''ಎಂದು ಪ್ರಶ್ನಿಸಿದರು. ''ಮೋದಿ ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 9 ವರ್ಷಗಳ ಕಾಲ ಲೋಕಾಯುಕ್ತವನ್ನು ನೇಮಕ ಮಾಡಿರಲಿಲ್ಲ. ಕೇಂದ್ರದಲ್ಲಿ ಲೋಕಪಾಲವನ್ನು ನೇಮಕ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಇದೀಗ ನಮ್ಮ ಸರಕಾರ ಭ್ರಷ್ಟ ಎಂದು ಕರೆಯುತ್ತಿದ್ದಾರೆ. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟರನ್ನು ಪಕ್ಕದಲ್ಲೇ ಕುಳಿಸಿಕೊಂಡು ಭ್ರಷ್ಟಾಚಾರ ಆರೋಪ ಮಾಡುತ್ತಿರುವುದು ನಾಚಿಕೆಗೇಡಿತನ ವಿಷಯ'' ಎಂದು ಸಿಎಂ ಹೇಳಿದ್ದಾರೆ. ''ನಮ್ಮ ಸಾಧನೆ ಮೆಚ್ಚಿ ಕೇಂದ್ರ ಸರಕಾರವೇ ಹಲವು ಪ್ರಶಸ್ತಿ ನೀಡಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಈತನಕ 207 ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಎಪಿಎಂಸಿಯಲ್ಲಿ ಆನ್ಲೈನ್ ಮಾರ್ಕೆಟಿಂಗ್ ವ್ಯವಸ್ಥೆ ಅಳವಡಿಸಿರುವ ದೇಶದ ಮೊದಲ ರಾಜ್ಯ ಕರ್ನಾಟಕ. ಇದರಿಂದ ರೈತರ ಆದಾಯದಲ್ಲಿ 38 ಶೇ. ಹೆಚ್ಚಳವಾಗಿದೆ ಎಂದು ನೀತಿ ಆಯೋಗದ ಅಂಕಿ-ಅಂಶ ಸ್ಪಷ್ಟಪಡಿಸಿದೆ. ದೇಶದಲ್ಲಿ ತೆರಿಗೆ ನೀಡುವ ದೇಶದಲ್ಲಿ ಕರ್ನಾಟಕದ ಮೂರನೇ ಸ್ಥಾನದಲ್ಲಿದೆ. ಮಲ್ಟಿ ಸೆಕ್ಟರ್ ಸ್ಟಾರ್ಟ್‌ಅಪ್ ಪಾಲಿಸಿ ಮೊದಲು ಘೋಷಿಸಿದ್ದು ನಮ್ಮ ರಾಜ್ಯ. ಈಗ ಉಳಿದ ರಾಜ್ಯಗಳು ನಮ್ಮನ್ನು ಅನುಸರಿಸುತ್ತಿವೆ ಎಂದು ವಿಧಾನಸೌಧದಲ್ಲಿ ದಾಖಲೆ ಸಹಿತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

Edited By

Shruthi G

Reported By

Madhu shree

Comments