ಅನ್ಯ ಪಕ್ಷಗಳಿಂದ ಬರುವವರಿಗೆ ಟಿಕೆಟ್ ಭರವಸೆ ನೀಡದಂತೆ ಬಿಜೆಪಿ ಹೈಕಮಾಂಡ್ ಸೂಚನೆ

22 Jan 2018 12:51 PM | Politics
224 Report

ಬಂದವರೆಲ್ಲರಿಗೂ ಟಿಕೆಟ್ ನೀಡುತ್ತಾ ಹೋದರೆ ಮೂಲ ಕಾರ್ಯಕರ್ತರು ಪಕ್ಷದ ವಿರುದ್ದ ಸಿಡಿದೇಳುವ ಸಂಭವವಿದೆ. ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಪಕ್ಷಕ್ಕೆ ಸೋಲಾಗುತ್ತದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸೂಚಿಸಿದೆ. ಈ ಸಂಬಂಧ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್‍ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೂಚನೆ ಕೊಟ್ಟಿದ್ದು , ಅನಗತ್ಯವಾಗಿ ಆಪರೇಷನ್ ಕಮಲ ಮಾಡಬೇಕಾದ ಅಗತ್ಯವಿಲ್ಲ. ನಮ್ಮಲ್ಲೇ ಅಭ್ಯರ್ಥಿಗಳಿಗೆ ಬರವಿಲ್ಲ ಎಂದುಹೈಕಮಾಂಡ್‍ನಿಂದ ಸೂಚನೆ ರವಾನೆಯಾಗಿದೆ.

.ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಬರುವವರನ್ನು ಮಾತ್ರ ಸೇರ್ಪಡೆ ಮಾಡಿಕೊಳ್ಳಬೇಕು. ಸದ್ಯಕ್ಕೆ ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ರಾಜ್ಯ ಘಟಕದ ನಾಯಕರಿಗೆ ಹೈಕಮಾಂಡ್‍ನಿಂದ ಸೂಚನೆ ರವಾನೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳಿಂದ ಬಂದವರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುವ ಅಗತ್ಯವಿಲ್ಲ. ಪಕ್ಷದಲ್ಲಿರುವ ಮೂಲ ಕಾರ್ಯಕರ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಂಡರೆ ಚುನಾವಣೆಯಲ್ಲಿ ನಮಗೆ ಗೆಲುವು ಸಾಧಿಸಲು ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದ್ದಾರೆ. ಈ ಹಿಂದೆ 2008ರಲ್ಲಿ ಬೇರೆ ಪಕ್ಷಗಳಿಂದ ಬಂದವರಿಗೆ ಆದ್ಯತೆ ನೀಡಿದ್ದರಿಂದಲೇ ನಾವು ಚುನಾವಣೆಯಲ್ಲಿ ಸೋಲಬೇಕಾಯಿತು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಈಗಲೂ ಪಕ್ಷದ ಸಂಘಟನೆ ಉತ್ತಮವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಅಧಿಕಾರದ ಆಸೆಗಾಗಿ ಬಂದವರಿಗೆ ಟಿಕೆಟ್ ನೀಡಿ ನಾಳೆ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‍ನ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿದರೆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಪರಿವರ್ತನಾ ಯಾತ್ರೆ ಯಶಸ್ವಿಯಾಗುತ್ತಿದ್ದು, ಜನರಿಂದ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಫೆ.4ರಂದು ಸಮಾರೋಪ ಸಮಾರಂಭ ಮುಗಿದ ನಂತರ ಪುನಃ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ. ಮೊದಲು ವಿವಿಧ ಪಕ್ಷಗಳ ಮುಖಂಡರನ್ನು ಸೆಳೆಯುವ ಆಪರೇಷನ್ ಕಮಲ ನಮಗೆ ಅಗತ್ಯವೆ ಇಲ್ಲ. ಕರ್ನಾಟಕದ ಜನತೆ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ ಎಂಬುದು ನಮಗೆ ತಿಳಿದಿದೆ. ಯಾವುದೇ ಸ್ಥಾನಮಾನದ ಆಸೆ ಇಟ್ಟುಕೊಳ್ಳದೆ ಬಂದವರನ್ನಷ್ಟೇ ಸೇರಿಸಿಕೊಳ್ಳಿ. ಪಕ್ಷಕ್ಕೆ ಬಂದು ಭಿನ್ನಮತ ಸೃಷ್ಟಿಸಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ಈ ಹಿಂದೆ ನಾವು ಮಾಡಿರುವ ಪ್ರಮಾದಗಳಿಂದ ಜನತೆ ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಪುನಃ ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಜನತೆ ನಮ್ಮನ್ನು ಮನ್ನಿಸುವ ಲಕ್ಷಣಗಳು ಕಾಣುವುದಿಲ್ಲ. ಎಲ್ಲ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಆಪರೇಷನ್ ಕಮಲ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಅಮಿತ್ ಷಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Edited By

Shruthi G

Reported By

Madhu shree

Comments