ಸಿದ್ದರಾಮಯ್ಯ ನವರು ಸಿ.ಎಂ.ಇಬ್ರಾಹಿಂರವರ ರೀತಿ ವರ್ತಿಸುತ್ತಾರೆ :ಎಚ್‌ಡಿಕೆ

05 Jan 2018 1:47 PM | Politics
344 Report

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಮಾರಂಭಗಳಲ್ಲಿ ಮಿಮಿಕ್ರಿ ಮಾಡುವ ಮೂಲಕ ಅವರ ಆಪ್ತ ಸಿ.ಎಂ.ಇಬ್ರಾಹಿಂ ರೀತಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶದ ಹೆಸರಿನಲ್ಲಿ ಕರ್ನಾಟಕ ಜನರ ತೆರಿಗೆ ಹಣವನ್ನು ಪಕ್ಷದ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದರು. 'ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡು ಪಕ್ಷದ ಬಾವುಟ ಹಾಕಿಕೊಂಡು, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ರಾಜಕೀಯ ಟೀಕೆಗಳನ್ನು ಮಾಡುತ್ತಿದ್ದಾರೆ' ಎಂದು ಅವರು ಟೀಕಿಸಿದರು.

ಸರ್ಕಾರ ನೀರಾವರಿ ಯೋಜನೆಗಳ ಬಗ್ಗೆ ನೀಡುತ್ತಿರುವ ಜಾಹಿರಾತುಗಳು ಸುಳ್ಳಾಗಿದ್ದು, ಯಾವ ಯೋಜನೆಗಳೂ ಪೂರ್ಣಗೊಂಡ ಯೋಜನೆಗಳಲ್ಲ ಎಂದ ಅವರು ಸರ್ಕಾರ ನೀಡಿರುವ ಜಾಹಿರಾತಿನಲ್ಲಿ ಎಲ್ಲೂ ಸರ್ಕಾರದ ಸಾಧನೆಗಳಿಲ್ಲ ಎಂದರು.ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿ ಮಾಡುತ್ತಿರುವ ಶಂಕು ಸ್ಥಾಪನೆಗಳು ಪೂರ್ಣವಾಗುವುದಿಲ್ಲ, ಮುಂಬರುವ ಸರ್ಕಾರಗಳು ಏನು ಮಾಡಬೇಕೆಂಬ ಪಟ್ಟಿಯನ್ನು ಅವರು ಮಾಡಿ ಹೋಗುತ್ತಿದ್ದಾರೆ ಅಷ್ಟೆ ಎಂದು ಮೂದಲಿಸಿದರು.





Edited By

Shruthi G

Reported By

Madhu shree

Comments