ಮೋದಿಯವರನ್ನು ಟೀಕೆ ಮಾಡದಂತೆ ಪಕ್ಷದ ಶಾಸಕರಿಗೆ ನೇರ ಸೂಚನೆ ನೀಡಿರುವ ಎಚ್ ಡಿಡಿ

28 Dec 2017 4:55 PM | Politics
439 Report

ರಾಜ್ಯಕ್ಕೆ ಕುಡಿಯುವ ನೀರಿಗಾಗಿ ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಬಿಡುವ ಚರ್ಚೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಜ್ಯಕ್ಕೆ ಬರುವಾಗ ಅಮಿತ್‍ಶಾ ಅವರು ಫಲಿತಾಂಶ ಘೋಷಿಸಬೇಕು ಎಂದರು. ಹೊಸ ವರ್ಷದಲ್ಲಾದರೂ ಮಹದಾಯಿ ಸಮಸ್ಯೆ ಬಗೆಹರಿಸಬೇಕೆಂದು ಅವರು ಮನವಿ ಮಾಡಿದರು.  ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ಪಕ್ಷದ ಶಾಸಕರಿಗೆ ನೇರ ಸೂಚನೆ ನೀಡಿದ್ದಾರೆ ಎಂದು ಕೋನರೆಡ್ಡಿ ತಿಳಿಸಿದರು.

ನನ್ನ ರಾಜೀನಾಮೆಯಿಂದ ಮಹದಾಯಿ ವಿವಾದ ಬಗೆಹರಿಯುವುದಾದರೆ ರಾಜೀನಾಮೆ ನೀಡುವುದಾಗಿ ಶಾಸಕ ಕೋನರೆಡ್ಡಿ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ರಾಜೀನಾಮೆ ಕೊಟ್ಟಿದ್ದೇ ಆದರೆ ರಾಜಿನಾಮೆ ಕೊಟ್ಟು ನಾಟಕವಾಡುತ್ತಿದ್ದಾರೆ ಎಂದು ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರುವುದೇ ಆದರೆ, ಫಲಿತಾಂಶದೊಂದಿಗೆ ಬರಬೇಕು. ಮಹದಾಯಿ ವಿವಾದ ಕುರಿತು ಅಮಿತ್ ಶಾ ಅವರ ಮನೆಯಲ್ಲಿ ಚರ್ಚೆಯಾಗಿದೆ.

ನಮಗೆ ನೀರು ಸಿಗಬೇಕಷ್ಟೇ. ಹೇಗಾದರು ಮಾಡಿ ಪ್ರಧಾನಿಯವರನ್ನು ಒಪ್ಪಿಸಿ ಮಹದಾಯಿ ನೀರು ತರಬೇಕಿದೆ. ಹೀಗಾಗಿ ಗೌಡರು ಪ್ರಧಾನಿ ಅವರನ್ನು ಟೀಕಿಸದಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ವಕೀಲ ಆತ್ಮಾನಂದನಾಡಕರಣಿ ವಿರುದ್ಧ ಹರಿಹಾಯ್ದ ಶಾಸಕರು, ನಮ್ಮ ರಾಜ್ಯದ ಬಗ್ಗೆ ಮಾತನಾಡಲು ಅವರ್ಯಾರು? ಅವರು ರಾಜಕಾರಣಿಯೇ? ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಕರ್ನಾಟಕ ರಾಜಕಾರಣದ ಬಗ್ಗೆ ವಿಶ್ವಾಸ ಇಲ್ಲ ಎನ್ನಲು ಅವರ್ಯಾರು ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಮಾವೇಶದಲ್ಲಿ ಮಹದಾಯಿ ವಿಚಾರಕ್ಕೆ ಸಂಬಂಧಿಸಿದ ಪತ್ರವನ್ನು ಓದಿದ್ದಾರೆ. ಅದೇ ನಮಗೆ ಮಾರಕವಾಗಲಿದೆ ಎಂಬ ಆತಂಕ ಕಾಡುತ್ತಿದೆ. ತಾಯಿ ಸ್ಥಾನದಲ್ಲಿ ಪ್ರಧಾನಿ ಇದ್ದಾರೆ. ಮಕ್ಕಳ ಸ್ಥಾನದಲ್ಲಿ ನಾವಿದ್ದೇವೆ. ಅವರನ್ನೇ ಕೇಳಬೇಕು. ರಾಜ್ಯದ ಬಗ್ಗೆ ಅವರಿಗೆ ವಿಶ್ವಾಸವಿದ್ದರೆ ನಾಡಕರಣಿ ಅವರನ್ನು ವಜಾಗೊಳಿಸಬೇಕು. ನಾಡಕರಣಿ ಅವರು ಕೂಡ ರಾಜ್ಯದ ಜನರ ಕ್ಷಮೆಯಾಚಿಸಬೇಕೆಂದರು.

Edited By

Shruthi G

Reported By

Madhu shree

Comments