ಸಂದರ್ಶನದಲ್ಲಿ ಕೆಪಿಜೆಪಿ ಬಗ್ಗೆ ಉಪ್ಪಿ ಹೇಳಿದ್ದೇನು ?

26 Dec 2017 10:43 AM | Politics
211 Report

ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ) ಸ್ಕ್ರಿಪ್ಟ್ ವರ್ಕ್ ನಡೀತಿದೆ. ನಾನಾ ಇಲಾಖೆಯ ಅಧಿಕಾರಿಗಳು, ವೈದ್ಯರು, ಶಿಕ್ಷಣತಜ್ಞರ ಜತೆ ಮಾತನಾಡ್ತಿದ್ದೀನಿ. ಬಜೆಟ್ ಹೇಗೆ ಸಿದ್ಧವಾಗುತ್ತದೆ? ಅದರ ಖರ್ಚು ಹೇಗೆ ಆಗುತ್ತದೆ ಇವೆಲ್ಲದರ ಅಧ್ಯಯನ ನಡೀತಾ ಇದೆ" ಎಂದು ಉತ್ತರಿಸಿದರು ನಟ- ಕೆಪಿಜೆಪಿಯ ಸಂಸ್ಥಾಪಕ ಉಪೇಂದ್ರ.

1.ಪಕ್ಷದ ಕೆಲಸ ಹೇಗೆ ನಡೆಯುತ್ತಿದೆ? ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ನಾನಾ ವೆಬ್ ಸೈಟ್ ಗಳಲ್ಲಿ ಮಾಹಿತಿ ನೋಡಿಕೊಳ್ಳುತ್ತಿದ್ದೀನಿ. ಜನರ ಮುಂದೆ ಸುಮ್ಮನೆ ನಿಲ್ಲುವುದಕ್ಕಾಗಲ್ಲ. ಮಾಹಿತಿ ಸಂಗ್ರಹಿಸಬೇಕು. ಜತೆಗೆ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು, ಶಿಕ್ಷಣ ತಜ್ಞರನ್ನು ಭೇಟಿ ಮಾಡಿ, ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಅಂತೆಲ್ಲ ತಿಳಿದುಕೊಳ್ಳುತ್ತಿದ್ದೀನಿ.
2.ಮೂರು ರಾಜಕೀಯ ಪಕ್ಷಗಳ ಯಾತ್ರೆ ಮಧ್ಯೆ ಉಪೇಂದ್ರರ ಪಕ್ಷಕ್ಕೆ ಮೀಡಿಯಾ ಮೈಲೇಜ್ ಸಿಕ್ತಿಲ್ಲವಲ್ಲ? ಹೀಗೆ ಆಗುತ್ತೆ ಅಂತ ನನಗೆ ಗೊತ್ತಿತ್ತು. ಇನ್ನು ಮುಂದೆ ಹೇಳುವ ವಿಚಾರ ಆಳವಾಗಿ ಹೇಳಬೇಕಾಗುತ್ತೆ. ಯಾವ ರೀತಿ ಹೇಳಿದರೆ ಜನರಿಗೆ ತಲುಪುತ್ತದೆ ಎಂಬುದರ ಬಗ್ಗೆ ನಮ್ಮದೊಂದು ಆಲೋಚನೆ ಇದೆ. ಆ ರೀತಿ ಹೇಳುತ್ತೇವೆ.
3.ಉಳಿದ ಪಕ್ಷಗಳು ಜನರನ್ನು ತಲುಪುತ್ತಿವೆ, ನಿಮ್ಮ ಪಕ್ಷದಿಂದ ಹೇಗೆ ತಲುಪುತ್ತೀರಿ? ಜನರಿಗೆ ತಲುಪುವುದು ಒಂದು ಬಗೆ, ತಲುಪಿದಂತೆ ತೋರಿಸಿಕೊಳ್ಳುವುದು ಒಂದು ಬಗೆ. ತುಂಬ ವರ್ಷದಿಂದ ನಡೆದುಕೊಂಡು ಬಂದಿರುವುದು ತೋರಿಸಿಕೊಳ್ಳುವುದೇ. ಅಂದಹಾಗೆ ಎಷ್ಟು ಕೆಲಸ ಮಾಡಿದ್ದಾರೆ, ಈ ಬಗ್ಗೆ ದಾಖಲೆ ಮುಂದಿಟ್ಟಿದ್ದಾರಾ? ಎಷ್ಟು ಬಜೆಟ್ ಇತ್ತು, ಖರ್ಚಾಗಿದ್ದೆಷ್ಟು ಇದೆಲ್ಲ ತಿಳಿಸಬೇಕು ಅಲ್ವಾ?
4.ನಿಮ್ಮ ಪಕ್ಷಕ್ಕೆ ಸಲಹೆಗಳನ್ನು ತೆಗೆದುಕೊಳ್ತಿದ್ದೀರಾ? ಐಎಎಸ್, ಐಪಿಎಸ್ ಅಧಿಕಾರಿಗಳು ವಿವಿಧ ಅಧಿಕಾರಿಗಳ ಜತೆ ಮಾತುಕತೆ ನಡೆಸ್ತಿದೀನಿ. ಅವರ ಸಲಹೆ ಪಡೆದುಕೊಳ್ತಿದೀನಿ. 
5.ಪಕ್ಷ ಆರಂಭಿಸಿದ ಮೇಲೆ ಮರೆಯಲಾರದಂಥ ಘಟನೆ, ವ್ಯಕ್ತಿಗಳ ಬಗ್ಗೆ ಹೇಳ್ತೀರಾ? ಒಂದು ಘಟನೆ ಅಲ್ಲ. ಅಪ್ಲಿಕೇಷನ್ ಮಾಡುವುದರಿಂದ ಹಿಡಿದು ಎಲ್ಲಕ್ಕೂ ಒಳ್ಳೆ ಸ್ಪಂದನೆ ಸಿಕ್ಕಿದೆ. ಇನ್ನು ವ್ಯಕ್ತಿಗಳ ಹೆಸರು ಹೇಳಬೇಕು ಅಂದರೆ ಬಹಳ ಜನರ ಹೆಸರು ಹೇಳಬೇಕಾಗುತ್ತದೆ. ಒಂದೊಂದು ಹಂತದಲ್ಲಿ ಬಂದು ಸಹಾಯ ಮಾಡಿದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು.
6.ನಿಮ್ಮ ಪಕ್ಷಕ್ಕೆ ಯಾರದಾದರೂ ಹೆಸರು ಹೇಳಬಹುದಾದಂಥವರ ಬೆಂಬಲ ಸಿಕ್ಕಿದೆಯಾ? ಬಹಳ ಜನ ಬೆಂಬಲ ಕೊಟ್ಟಿದ್ದಾರೆ. ಹಾಗಂತ ಹೆಸರು ಹೇಳೋದು ಬೇಡ. ಹಾಗೆ ನೋಡಿದರೆ ನಮಗೆ ಕಲ್ಪನೆಯಲ್ಲೇ ಹೆಚ್ಚು ಸಂತೋಷ. ಇದನ್ನು ಇನ್ಯಾರೋ ಮಾಡಲಿ ಎಂಬುದರಲ್ಲೇ ಖುಷಿ. ಎಜುಕೇಷನ್ ಅಂದರೆ ಬೈ ಹಾರ್ಟ್ ಮಾಡಿ, ಎಕ್ಸಾಂನಲ್ಲಿ ಕಕ್ಕಿ, ಆ ನಂತರ ಮರೆತು ಬಿಡುವುದು ಎಂಬಂತಾಗಿದೆ. ಪ್ರಾಕ್ಟಿಕಲ್ ಜ್ಞಾನ ಯಾರಿಗೂ ಬೇಡವಾಗಿದೆ.


Edited By

Shruthi G

Reported By

Madhu shree

Comments