ಚುನಾವಣೆಗಾಗಿ ಬಿಜೆಪಿಯ ಮತ್ತೊಂದು ನಾಟಕ : ಎಚ್ ಡಿಕೆ

23 Dec 2017 10:53 AM | Politics
258 Report

ಮಹದಾಯಿ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದು, ನಾಡಿನ ಹಿತಾಸಕ್ತಿಗಿಂತ ಚುನಾವಣೆ ಗೆಲುವೇ ಮುಖ್ಯವಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು ''ಉತ್ತರ ಕರ್ನಾಟಕ ಭಾಗದ ಜನರ ಮತಪಡೆಯಲು ಬಿಜೆಪಿಯವರು ಡಬಲ್‌ಗೇಮ್‌ ರಾಜಕಾರಣ ಮಾಡುತ್ತಿದ್ದಾರೆ'' ಎಂದು ದೂರಿದರು.''ಯಡಿಯೂರಪ್ಪ ಅವರು ರಾಜ್ಯದ ಜನರಿಗಾಗಿ ರಕ್ತ ಕೊಡಲೂ ಸಿದ್ಧ ಎಂದು ಹೋದಲ್ಲಿ ಬಂದಲ್ಲೆಲ್ಲಾ ಹೇಳುತ್ತಿದ್ದಾರೆ. ನಮಗೆ ಯಡಿಯೂರಪ್ಪ ಅವರ ರಕ್ತದ ಅಗತ್ಯವಿಲ್ಲ. ನಮಗೆ ಬೇಕಿರುವುದು ನೀರು ಮಾತ್ರ. ಪಕ್ಷದ ಸ್ವಾರ್ಥಕ್ಕೆ ಜನರನ್ನು ಬಲಿಕೊಡುವುದು ಬೇಡ'' ಎಂದು ಸಲಹೆ ಮಾಡಿದರು.

''ಮಹದಾಯಿ ಹೋರಾಟಗಾರರು ಇನ್ನೂ ಜೈಲಿನಲ್ಲಿದ್ದಾರೆ. ಕೋರ್ಟ್‌, ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಸರಕಾರವಾಗಲೀ, ಬಿಜೆಪಿ ನಾಯಕರಾಗಲೀ ತುಟಿ ಬಿಚ್ಚುತ್ತಿಲ್ಲ. ಬದಲಿಗೆ, ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ಇಳಿದಿವೆ. ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಮತ್ತು ಸತ್ಯಸಂಗತಿಗಳ ಬಗ್ಗೆ ನೀರಾವರಿ ಮತ್ತು ಕಾನೂನು ತಜ್ಞರು ಬೆಳಕು ಚೆಲ್ಲುವ ಅಗತ್ಯವಿದೆ'' ಎಂದು ಹೇಳಿದರು.

Edited By

Shruthi G

Reported By

Shruthi G

Comments