ನಾಳೆಯಿಂದ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬಿಜೆಪಿಯತ್ತ

18 Dec 2017 1:15 PM | Politics
341 Report

ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದಿಂದ ಕರ್ನಾಟಕದಲ್ಲಿ ಟಾರ್ಗೆಟ್ 150 ಗುರಿ ತಲುಪಲು ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

ಉಭಯ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನವರು ನಾಳೆಯಿಂದ ಬಿಜೆಪಿ ಕಡೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬರಲಿದ್ದಾರೆ. ಈಗಾಗಲೇ ಸಾಕಷ್ಟು ಜನರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯದಲ್ಲಿ‌ ದೊಡ್ಡ ಪ್ರಮಾಣದ ಆಪರೇಷನ್ ಕಮಲ ನಡೆಯಲಿದೆ ಎಂದು ಸುಳಿವು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೂರೂವರೆ ವರ್ಷದ ಕೆಲಸಕ್ಕೆ ಜನ ಮನ್ನಣೆ ನೀಡಿದ್ದಾರೆ. ಮೋದಿ, ಅಮಿತ್ ಶಾ ಜೋಡಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದತ್ತ ದಾಪುಗಾಲಿಡುತ್ತಿದ್ದಾರೆ. ಮುಂದಿನ ಗುರಿ ಕರ್ನಾಟಕ, ಇಲ್ಲಿಯೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.

ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಬರಬಹುದು. ಆದರೆ, ಇದು ಕಾಂಗ್ರೆಸ್‌ನ ದೊಡ್ಡ ಸಾಧನೆ ಅಲ್ಲ. ಪಟೇಲ್ ಸಮುದಾಯದ ಪ್ರತಿಭಟನೆ ಇತ್ಯಾದಿ ಕಾರಣಗಳಿಂದಾಗಿ ಅಲ್ಲಿ ಬಿಜೆಪಿ‌‌ ಸ್ಥಾನ ಗಳಿಕೆಯಲ್ಲಿ ಅಲ್ಪ ಹಿನ್ನಡೆ ಅನುಭವಿಸಬಹುದು ಎಂದರು.

ರಾಜ್ಯ ಕಾಂಗ್ರೆಸ್ ಈಗ‌ ಚುರುಕಾಗಿ ರಾಜ್ಯ ಪ್ರವಾಸ ಆರಂಭಿಸಿದೆ. ಆದರೆ, ಉಭಯ ರಾಜ್ಯಗಳ ಚುನಾವಣಾ ಫಲಿತಾಂಶದಿಂದಾಗಿ ಈಗ ಆ್ಯಕ್ಟೀವ್ ಆಗಿರುವ ಕಾಂಗ್ರೆಸ್ ನಾಯಕರು ನಾಳೆಯಿಂದ ಮನೆಯಲ್ಲಿ ಮುದುಡಿಕೊಂಡು ಕೂರಲಿದ್ದಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

Edited By

Shruthi G

Reported By

Shruthi G

Comments