ಎಚ್ ಡಿಕೆ-ಡಿಕೆಶಿ ಸ್ನೇಹ ಕಂಡು ಜೆಡಿಎಸ್ ನಿಂದ ಅಮಾನತ್ತಾದ ಶಾಸಕರಿಗೆ ಆತಂಕ ಮೂಡಿಸಿದೆ

28 Nov 2017 11:55 AM | Politics
23615 Report

ರಾಜ್ಯ ರಾಜಕಾರಣದಲ್ಲಿ ವೈರಿಗಳೆಂದು ಗುರುತಿಸಿಕೊಂಡಿದ್ದ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇತ್ತೀಚೆಗೆ ಹೆಚ್ಚು ಸ್ನೇಹದಿಂದಿದ್ದಾರೆ. ಇದರಿಂದ ಇಬ್ಬರು ಶಾಸಕರಾದ ಎನ್.ಚಲುವರಾಯಸ್ವಾಮಿ ಹಾಗೂ ಎಚ್.ಸಿ.ಬಾಲಕೃಷ್ಣ ಅವರಿಗೆ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್ ನಿಂದ ಅಮಾನತ್ತಾಗಿ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ ಇಬ್ಬರಲ್ಲೂ ಈ ಬೆಳವಣಿಗೆ ದಿಗಿಲು ಉಂಟು ಮಾಡಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಶಾಸಕ ಚಲುವರಾಯಸ್ವಾಮಿ ಹಾಗೂ ರಾಮನಗರ ಜಿಲ್ಲೆ ಮಾಗಡಿ ಶಾಸಕರಾಗಿರೋ ಎಚ್.ಸಿ ಬಾಲಕೃಷ್ಣ ಅವರು ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ದೋಸ್ತಿಯಿಂದ ದಿಗ್ಭ್ರಮೆಗೊಂಡಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಒಳ ಒಪ್ಪಂದ ಮಾಡಿಕೊಂಡರೆ ತಮ್ಮ ಗೆಲುವಿಗೆ ಸಂಕಷ್ಟ ಎದುರಾಗಬಹುದು ಎನ್ನುವುದು ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣ  ಅವರ ಆತಂಕವನ್ನು ಹೆಚ್ಚಿಸಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಾಜಕೀಯ ಆಟದಲ್ಲಿ ಚತುರತೆ ಹೊಂದಿರುವ ಡಿಕೆಶಿ ಹಾಗೂ ಎಚ್ ಡಿಕೆ ಇತ್ತೀಚೆಗೆ ಸಂಪರ್ಕದಲ್ಲಿರುವುದು ಈಗ ಚಲುವರಾಯಸ್ವಾಮಿ,ಬಾಲಕೃಷ್ಣಗೆ ತಲೆನೋವಾದಂತಾಗಿದೆ. 

Edited By

Shruthi G

Reported By

Shruthi G

Comments