ವಿದ್ಯುತ್ ಹಗರಣದ ಬಂಡವಾಳ ಬಯಲು ಮಾಡುತ್ತೇವೆ : ಎಚ್ ಡಿಕೆ ಭರವಸೆ

22 Nov 2017 1:52 PM | Politics
650 Report

ಇಂಧನ ಇಲಾಖೆ ವಿದ್ಯುತ್ ಹಗರಣದ ವರದಿ ಮಂಡನೆ ಮಾಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಇಂತಹ ವರದಿ ಮಂಡಿಸಲು ನಾಲ್ಕು ವರ್ಷಗಳ ಅವಧಿ ಬೇಕಿತ್ತೆ ಎಂದು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ವರದಿಯ ಹಿಂದಿನ ಬಂಡವಾಳ ಬಯಲು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 ವಿದ್ಯುತ್ ಖರೀದಿಯಲ್ಲಿ ನಷ್ಟವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗಿದೆ. ಆದರೆ, ವರದಿಯಲ್ಲಿ ಯಾವುದೇ ರೀತಿಯ ಸತ್ಯಾಂಶವಿದ್ದಂತೆ ಇಲ್ಲ ಎಂದು ಅವರು ಹೇಳಿದರು. ಈ ವರದಿಗೆ ನಾವು ಸಹಿಯನ್ನೂ ಹಾಕಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ವಿವರಗಳನ್ನು ನೀಡುತ್ತೇನೆ ಎಂದು ತಿಳಿಸಿದರು. ಸದನದಲ್ಲಿ ಇಂಧನ ಇಲಾಖೆ, ಕೆರೆ ಒತ್ತುವರಿ ಸಮಿತಿ ವರದಿಯನ್ನು ಮಂಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಕಳಸಾ-ಬಂಡೂರಿ, ಮಹದಾಯಿ ವಿಚಾರವಾಗಿ ಯಾವುದೇ ರೀತಿಯ ಗಂಭೀರ ಚರ್ಚೆ ನಡೆದಿಲ್ಲ. ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಭಾಗದ ಜನರ ಸಮಸ್ಯೆಗಳಿಗೆ ನಾವೆಲ್ಲ ದನಿಯಾಗಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

Edited By

Hema Latha

Reported By

Madhu shree

Comments