ವಿದ್ಯುತ್‌ ಘಟಕ ಸ್ಥಾಪನೆ ಒಪ್ಪಂದ ರದ್ದು ಮಾಡಿಲ್ಲ : ಡಿಕೆ ಶಿವಕುಮಾರ್

22 Nov 2017 11:49 AM | Politics
346 Report

'ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪಂದ ರದ್ದು ಮಾಡಿಕೊಂಡಿದೆ, ಎಂದು ಮುಖ್ಯಮಂತ್ರಿ ರಮಣ್‌ಸಿಂಗ್‌ ಹೇಳಿರುವುದು ತಪ್ಪು. ಮಾಹಿತಿ ಕೊರತೆಯಿಂದ ಹೀಗೆ ಹೇಳಿರಬಹುದು. ದೇಶದಲ್ಲಿ ಕಲ್ಲಿದ್ದಲು ಸಮಸ್ಯೆ ಇದೆ. ಅದೇ ಕಾರಣಕ್ಕೆ ಆರ್‌ಟಿಪಿಎಸ್‌ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಒಪ್ಪಂದ ರದ್ದು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

'ನಾನು ಇಂಧನ ಸಚಿವನಾಗಿದ್ದಾಗ ಛತ್ತೀಸಗಡಕ್ಕೆ ಹೋಗಿ ವೀಕ್ಷಿಸಿ ಬಂದಿದ್ದೆ. ಆಗ ಕಲ್ಲಿದ್ದಲ್ಲು ಗಣಿಗೆ ಕೇಂದ್ರ ಒಪ್ಪಿಗೆ ಕೊಡಲಿಲ್ಲ. ಈಗಲಾದರೂ ಒತ್ತಡ ತರುವ ಕೆಲಸ ಆಗಬೇಕಿದೆ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು. ‘ಐದು ವರ್ಷವಾದರೂ ಕಲ್ಲಿದ್ದಲು ಗಣಿ ಮಂಜೂರು ಆಗಿಲ್ಲ. ಈಗ ನೀವೇ ಕೇಂದ್ರಕ್ಕೆ ಹೇಳಿ, ಆದಷ್ಟು ಬೇಗ ಮಂಜೂರು ಮಾಡಿಸಿಕೊಡಬೇಕು’ ಎಂದು ಸಚಿವ, ಈಶ್ವರಪ್ಪಗೆ ತಿರುಗೇಟು ನೀಡಿದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಸೋಮಣ್ಣ, ‘ನಿನ್ನೆಯ ಸಭೆಯಲ್ಲಿ ನಾನಿದ್ದೆ. ಒಪ್ಪಂದ ರದ್ದಾಗಿದೆ ಎಂದಿಲ್ಲ. ಮುಂದುವರಿಯದಿರುವುದು ದುರಂತ ಎಂದಿದ್ದರು’ ಎಂದು ರಮಣ್‌ಸಿಂಗ್‌ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದರು.

Edited By

Hema Latha

Reported By

Madhu shree

Comments