ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವುದು ನನ್ನ ಜೀವನದ ಕನಸು : ಎಚ್ ಡಿಡಿ

31 Oct 2017 11:34 AM | Politics
365 Report

ಸುಭೀಕ್ಷವಾದ ಸರ್ಕಾರ ಬರಬೇಕಾದ್ರೆ, ಯೋಗ್ಯವಾದ ನಾಯಕನಿಗೆ ಆಡಳಿತ ಕೊಡಬೇಕು. ಅದರಿಂದ ಕುಮಾರಸ್ವಾಮಿಗೆ ಒಂದು ಅವಕಾಶ ಕೊಟ್ಟು ನೋಡೋಣ. ಈ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತೆ. ಪ್ರತಿ ರೈತನೂ ಇದು ನಮ್ಮ ಸರ್ಕಾರ ಎಂದು ಹೇಳಬೇಕು. ಅದು ನನ್ನ ಜೀವನದ ಕನಸು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಆಶಯ ವ್ಯಕ್ತಪಡಿಸಿದರು.

ಮುಂದಿನ ತಿಂಗಳು ಪಕ್ಷ ಸಂಘಟನೆ ಸಂಬಂಧ ಚರ್ಚಿಸಲು ಸಭೆ ಕರೆದಿದ್ದೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡೋಕೆ ಪಕ್ಷ ಉಳಿಸಿ ಎಂದು ಹೇಳುತ್ತಿಲ್ಲ. ಪಕ್ಷ ಉಳಿದರೆ ಮಾತ್ರವಷ್ಟೇ ಕುಮಾರಸ್ವಾಮಿ ಉಳಿಯೋದು. ಪಕ್ಷದ ಉಳಿವಿನಿಂದ ರಾಜ್ಯದ ಶ್ರೇಯೋಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು. ಪಂಚರಾಜ್ಯಗಳ ಚುನಾವಣೆ ದೇಶದ ಮಿನಿ ತೀರ್ಪಾಗಲಿದೆ. ಈ ಚುನಾವಣೆ ಫ‌ಲಿತಾಂಶ ಆಧರಿಸಿ ಮೀಸಲಾತಿ ಮಾರ್ಪಾಡಾಗಲಿದೆ. ಯಾವುದೋ ಒಂದೆರಡು ಜಾತಿಯ ಹಿಡಿತದಲ್ಲಿ ಮೀಸಲಾತಿ ಇರಬಾರದೆಂದು ಎಲ್ಲರಿಗೂ ಸಮಾನ ಅವಕಾಶ (ಮೀಸಲಾತಿ) ಕೊಟ್ಟೆ. ಅದನ್ನು ಯಾರಿಂದಲೂ ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಡಿಜಿಟಲ್‌ ಇಂಡಿಯಾ ಮಾಡ್ತೀನಿ ಅಂತಾರೆ. ಆ ವ್ಯವಸ್ಥೆಗೆ ನಮಗೇ ಹೊಂದಿಕೊಳ್ಳಲು ಐದತ್ತು ವರ್ಷವಾದರೂ ಬೇಕು. ಇದರಿಂದ ರೈತರಿಗೆ ತೊಂದರೆಯಾಗಲಿದೆ. ನಮಗೆ ಡಿಜಿಟಲ್‌ ಇಂಡಿಯಾ ಬೇಡ, ರೈತರ ಇಂಡಿಯಾ ಬೇಕು ಎಂದು ಎಚ್‌.ಡಿ.ದೇವೇಗೌಡರು ಹೇಳಿದರು.

ಹಾಸ್ಯ ಮಾಡ್ತಿರೋರಿಗೆ ಬುದ್ಧಿ ಕಲಿಸಿ:
ಅಧಿಕಾರಕ್ಕೆ ಬಂದ ಕೂಡಲೇ ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆ ಎಂದು ನಾವು ಹೇಳುತ್ತಿದ್ದೇವೆ. ಅದಕ್ಕೆ ಸಿದ್ದರಾಮಯ್ಯ, ಶೆಟ್ಟರ್‌ ನೀವು ಅಧಿಕಾರಕ್ಕೆ ಬರಲ್ಲ ಅಂತ ಹಾಸ್ಯ ಮಾಡುತ್ತಿದ್ದಾರೆ. ಅವರಿಗೆ ಜನರು ಬುದ್ಧಿ ಕಲಿಸಬೇಕು. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ರೈತರ ಸಾಲವನ್ನು ಮನ್ನಾ ಮಾಡಿಯೇ ತೀರುತ್ತೇವೆ. ಅದನ್ನು ಸಾಬೀತುಪಡಿಸಲು ಜನರು ನಮ್ಮನ್ನು ಬೆಂಬಲಿಸಬೇಕು ಎಂದರು.

Edited By

Shruthi G

Reported By

Madhu shree

Comments