ಕೈ-ಕಮಲ ಕಿತ್ತಾಟದ ಲಾಭ ಜೆಡಿಎಸ್ ಗೆ ಸಿಗಲಿದ್ಯಾ?

13 Oct 2017 6:19 PM | Politics
394 Report

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಮತ್ತೊಂದೆಡೆ ಟಿಕೆಟ್ ಗಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರಗಳು ನಡೆದಿವೆ. ಅಷ್ಟೇ ಅಲ್ಲದೇ ಟಿಕೆಟ್ ಗಾಗಿ ಮೂರು ಪಕ್ಷಗಳಲ್ಲಿ ಮುಸುಕಿನ ಗುದ್ದಾಟಗಳೂ ಸಹ ಆರಂಭವಾಗಿವೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತಯೇ ರಾಜ್ಯ ರಾಜಕಾರಣದಲ್ಲಿ ಹಲವು ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಆಗಾಗ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಹಾತೊರೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‍ ನ ಆಡಳಿತ ಮತ್ತು ಅವರೊಳಗಿನ ಜಟಾಪಟಿಯನ್ನೆಲ್ಲ ಹತ್ತಿರದಿಂದ ನೋಡಿದ ಮತದಾರ ಜೆಡಿಎಸ್ ನತ್ತ ಒಲವು ತೋರಲಿದ್ದಾನೆ ಎಂಬ ನಿರೀಕ್ಷೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರಿದ್ದಾರೆ.
ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ನಾಯಕರ ಕೊರತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಿಡಿದೆದ್ದು ಬರುವ ಪ್ರಭಾವಿ ನಾಯಕರಿಗೆ ಜೆಡಿಎಸ್ ಮಣೆ ಹಾಕಲು ಪ್ಲಾನ್ ಮಾಡಿದೆ.

ಉತ್ತರ ಕರ್ನಾಟಕದತ್ತ ಜೆಡಿಎಸ್ ಚಿತ್ತ ಇದೆಲ್ಲದರ ನಡುವೆ ಸ್ವಂತ ಬಲದಿಂದ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದಿರುವ ದೇವೇಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಮೂಲೆ ಮೂಲೆಗಳಿಗೂ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರು ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಒಂದಷ್ಟು ಪ್ರಾಬಲ್ಯ ಇರುವುದರಿಂದ ಇಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಶ್ರಮಪಡುತ್ತಿದ್ದಾರೆ. ಜತೆಗೆ ಉತ್ತರ ಕರ್ನಾಟಕದತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮತದಾರರೇ ಅಂತಿಮ ತೀರ್ಪುಗಾರರು. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿರುವ ಜೆಡಿಎಸ್ ನಾಯಕರು ಪಕ್ಷ ಸಂಘಟನೆಯೊಂದಿಗೆ ದೇವರ ಮೊರೆಹೋಗುತ್ತಿರುವುದು ಕೂಡ ಕಂಡು ಬಂದಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

 

 

Edited By

Hema Latha

Reported By

Madhu shree

Comments