ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿರುವ ಪದ್ಮನಾಭ ರೆಡ್ಡಿ

11 Oct 2017 2:23 PM | Politics
336 Report

ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷದ ಆಡಳಿತ ವೈಫಲ್ಯ ಖಂಡಿಸಿ ಹಾಗೂ ರಸ್ತೆ ಗುಂಡಿ ಕಸದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬಿಬಿಎಂಪಿ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ-ಜಾರ್ಜ್ ವಿರುದ್ಧ ಅವಹೇಳನಕಾರಿ ಪದ ಬಳಸಿ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.

 

ಬೆಂಗಳೂರು ಹೆಸರು ಹಾಳಾಗಲು ಸಿದ್ದರಾಮಯ್ಯ ಕಾರಣ :

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಇಂದು ಬೆಂಗಳೂರಿನ ಹೆಸರು ಹಾಳಾಗುತ್ತಿದೆ ಎಂದರೆ ಅದಕ್ಕೆ ಸಿಎಂ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ಎದ್ದು ಬೈಕ್ ಹೊರಗೆ ತೆಗೆದರೆ ಮನೆಗೆ ಹೋಗುವ ಗ್ಯಾರಂಟಿ ಇಲ್ಲ ಎಂಬಂತಾಗಿ ಬಿಟ್ಟಿದೆ ನಮ್ಮ ನಗರದ ಪರಿಸ್ಥಿತಿ. ಗುಂಡಿಗೆ ಬಿದ್ದು ಜನರು ಸತ್ತಿಲ್ಲ. ತಮ್ಮ ತಪ್ಪಿನಿಂದ ಸತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಕೆ.ಜೆ.ಜಾರ್ಜ್ ಅವರು ಪ್ರಾಣಕ್ಕೆ ಬೆಲೆಯಿಲ್ಲದಂತೆ ಮಾತನಾಡಿದ್ದಾರೆ ಎಂದು ಟೀಕಿಸಿದರು.

ವಿರೋಧ ಪಕ್ಷದವರು ನೀವೇ ಗುಂಡಿ ಮುಚ್ಚಿ ಎಂದು ಹೇಳಲಾಗುತ್ತಿದೆ. ನಾವು ಸಿದ್ದರಿದ್ದೇವೆ ಕಾಂಗ್ರೆಸ್ ಪಕ್ಷವನ್ನು ಮುಚ್ಚೋಕೆ. ಫೈಥಾನ್ ಬಳಸಿಕೊಂಡು ದಿನಕ್ಕೆ 4 ಕಿ.ಮೀ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಜನರ ಸಾವು ತಪ್ಪಿಸಲು ಪೊಲೀಸರು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಕಿಡಿಕಾರಿದರು.೨೨ ಕೋಟಿ ಗುಂಡಿ ಮುಚ್ಚಲೆಂದು ಹಣ ಬಳಕೆ ಮಾಡಲಾಗುತ್ತಿದೆ. ಆದರೆ ಗುಂಡಿ ಮುಚ್ಚಿದ್ದು ಕಾಣುತ್ತಿಲ್ಲ. ಈ ಮೂಲಕ ಸಾರ್ವಜನಿಕರ ಕೋಟಿ ಕೋಟಿ ಹಣವನ್ನು  ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು. ಬೆಂಗಳೂರು ಅಭಿವೃದ್ಧಿಗೆ 4 ಸಾವಿರ ಕೋಟಿ ನೀಡಿರುವುದಾಗಿ ಸಿಎಂ ಹೇಳುತ್ತಾರೆ. ಆದರೆ ಯಾವುದೇ ಅಭಿವೃದ್ದಿ ಆಗಿಲ್ಲ . ಹಾಗಾದರೆ ಆ ಹಣ ಏನಾಯ್ತು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅಶೋಕ್ ಒತ್ತಾಯಿಸಿದರು.

 

Edited By

Hema Latha

Reported By

Madhu shree

Comments