ವಿಧಾನ ಸಭಾ ಚುನಾವಣೆಯ ಗೆಲುವಿಗಾಗಿ ರಾಜಕೀಯ ಪಕ್ಷಗಳು ಏನೆಲ್ಲ ತಂತ್ರ, ಕಸರತ್ತು ನಡೆಸುತ್ತಿವೆ ?

09 Oct 2017 1:10 PM | Politics
378 Report

ಆಡಳಿತಾರೂಢ ನಾಯಕರು ತಾವೇನು ಕೆಲಸ ಮಾಡಿದರೂ ಅದನ್ನು ಚುನಾವಣಾ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಉಳಿದವರು ಮತದಾರರನ್ನು ಸೆಳೆಯಲು ಬೇಕಾದ ತಂತ್ರಗಳನ್ನು ಹುಟ್ಟುಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

 ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆಯ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ತಂತ್ರ-ಪ್ರತಿತಂತ್ರ, ಆರೋಪ-ಪ್ರತ್ಯಾರೋಪಗಳು ಆರಂಭವಾಗತೊಡಗಿವೆ. ಅಷ್ಟೇ ಅಲ್ಲದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮಣೆ ಹಾಕುವ ಪಕ್ಷಗಳಿಗೆ ಗುಳೆ ಹೋಗುವ ಪಕ್ಷಾಂತರ ಪ್ರಕ್ರಿಯೆ ಈಗಿನಿಂದಲೇ ಆರಂಭವಾಗಿದೆ. ಬಿಜೆಪಿ ಈಗಾಗಲೇ ವಿಸ್ತಾರಕ್ ಮೂಲಕ ಮನೆ ಬಾಗಿಲು ತಟ್ಟಿದ್ದರೆ, ಕಾಂಗ್ರೆಸ್, ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಇನ್ನು ಇವೆರೆಡು ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಜೆಡಿಎಸ್, ಮನೆ ಮನೆಗೆ ಕುಮಾರಣ್ಣ ಎಂಬ ಹೆಸರಿನಲ್ಲಿ ಮತಭಿಕ್ಷೆಗೆ ವೇದಿಕೆ ಶುರು ಮಾಡಿಕೊಂಡಿದೆ. ಇನ್ನು ಜಾತಿ, ಸಂಘ, ಸಂಸ್ಥೆಗಳತ್ತ ಒಲವು ತೋರುತ್ತಿರುವ ನಾಯಕರು ಆ ಮೂಲಕ ಸಾಮೂಹಿಕ ಮತಗಳನ್ನು ಸೆಳೆಯುವ ತಂತ್ರವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಜನರನ್ನು ಸೆಳೆಯುವ ತಂತ್ರವಾಗಿ ಹುಟ್ಟು ಹಬ್ಬ ಇನ್ನಿತರ ಕಾರ್ಯಕ್ರಮಗಳ ನೆಪದಲ್ಲಿ ಬಾಡೂಟ, ಉಡುಗೊರೆ ನೀಡುವ ಕಾರ್ಯವೂ ನಡೆದಿವೆ.ಇನ್ನೊಂದಷ್ಟು ಮುಖಂಡರು ಒಂದಷ್ಟು ಬೆಂಬಲಿಗರು ಜನರನ್ನು ಸೇರಿಸಿ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಕೂಡ ಕಾಣಬಹುದಾಗಿದೆ. ಕೆಲವರು ತಮಗೆ ಟಿಕೆಟ್ ಸಿಗುವುದು ಖಾತರಿಯಾದ ಹಿನ್ನಲೆಯಲ್ಲಿ ಪ್ರಚಾರ ಆರಂಭಿಸಿದ್ದು, ಇನ್ನು ಕೆಲ ನಾಯಕರು ತಾವಿರುವ ಪಕ್ಷದಲ್ಲಿ ಟಿಕೆಟ್ ಸಿಗಲ್ಲ ಎಂದು ಖಾತ್ರಿಯಾದ ಬಳಿಕ ಮತ್ತೊಂದು ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸ್ವಪಕ್ಷಗಳ ನಾಯಕರ ನಡುವೆ ಟಿಕೆಟ್ ಗಾಗಿ ಮುಸುಕಿನ ಗುದ್ದಾಟವೂ ಆರಂಭವಾಗಿದೆ. ಜಾತಿ ಮತ್ತು ಹಣದ ಪ್ರಭಾವ ಬಳಸಿ ಟಿಕೆಟ್ ಪಡೆಯಲು ನಾಯಕರ ಬಾಗಿಲಿಗೆ ಎಡತಾಕಲು ಕೆಲವರು ಆರಂಭಿಸಿದ್ದರೆ, ಗೆದ್ದ ಬಳಿಕ ತಮ್ಮ ಕ್ಷೇತ್ರದತ್ತ ಮುಖ ಮಾಡದ ಶಾಸಕರು ಈಗ ಕಾಳಜಿ ತೋರಿಸುತ್ತಿರುವುದು ಒಂದೆಡೆಯಾದರೆ ಅವರ ನಿರ್ಲಕ್ಷ್ಯತೆ, ಅಕ್ರಮಗಳನ್ನು ಬಯಲು ಮಾಡಲು ವಿರೋಧಿಗಳು ಕಾಯುತ್ತಿದ್ದಾರೆ. ಅಷ್ಟಕ್ಕೂ 2018ರ ವಿಧಾನಸಭೆ ಚುನಾವಣೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಮೂರು ಪಕ್ಷಕ್ಕೂ ಅಷ್ಟು ಸುಲಭವಾಗಿಲ್ಲ. ಮೇಲ್ನೋಟಕ್ಕೆ ಗೆಲುವು ನಮ್ಮದೇ ಎನ್ನುವ ಮೂರು ಪಕ್ಷಗಳಿಗೂ ಒಳಗೊಳಗೆ ಭಯವಿದೆ. ಕಾಂಗ್ರೆಸ್‍ ಗೆ ಅಧಿಕಾರ ಉಳಿಸಿಕೊಳ್ಳುವ ಇರಾದೆಯಾದರೆ, ಬಿಜೆಪಿಗೆ ಗೆಲ್ಲಲೇ ಬೇಕೆಂಬ ಹಠ. ಇದರ ನಡುವೆ ರಾಷ್ಟ್ರೀಯ ಪಕ್ಷಗಳನ್ನು ಬದಿಗೆ ಸರಿಸಿ ಅಧಿಕಾರ ಹಿಡಿಯುವ ಕನಸು ಜೆಡಿಎಸ್ ನದ್ದಾಗಿದೆ. ಗೆಲುವಿಗಾಗಿ ಏನೆಲ್ಲ ತಂತ್ರ, ಕಸರತ್ತು ಮಾಡಬಹುದೋ ಅದನ್ನು ಮಾಡುತ್ತಲೇ ಮತ್ತೊಂದೆಡೆ ಹೋಮ, ಹವನ, ಪೂಜೆ ಎನ್ನುತ್ತಾ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ. ಆದರೆ, ಪ್ರಜ್ಞಾವಂತ ಮತದಾರರು ಮಾತ್ರ ಇದೆಲ್ಲವನ್ನು ಗಮನಿಸುತ್ತಲೇ ಇದ್ದಾರೆ. ಯಾರಿಗೆ ಯಾವ ರೀತಿಯಲ್ಲಿ ಉತ್ತರ ಕೊಡಬೇಕೆನ್ನುವುದು ಅವರಿಗೂ ಗೊತ್ತಾಗಿದೆ. ಈ ಹಿನ್ನಲೆಯಲ್ಲಿ 2018ರ ವಿಧಾನಸಭೆ ಚುನವಾಣೆ ತೀವ್ರ ಕುತೂಹಲ ಮೂಡಿಸಿದೆ.

Edited By

Hema Latha

Reported By

Madhu shree

Comments