ರಾಮನಗರದಿಂದಲೇ ಕುಮಾರಸ್ವಾಮಿ ಸ್ಪರ್ಧೆ : ದೇವೇಗೌಡರ ಸ್ಪಷ್ಟನೆ

03 Oct 2017 11:03 AM | Politics
371 Report

ರಾಮನಗರ : "ಈ ಹಿಂದೆ ಎಚ್.ಡಿ ಕುಮಾರಸ್ವಾಮಿ ಕ್ಷೇತ್ರ ಬದಲಾಯಿಸಿ ತಪ್ಪು ಮಾಡಿದ್ದರು. ಆದರೆ, ಈ ಬಾರಿ ಆ ತಪ್ಪು ಮಾಡುವುದಿಲ್ಲ," ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸ್ಪಷ್ಟಪಡಿಸಿದರು. "ಲೋಕಸಭೆ ಚುನಾವಣೆಯಲ್ಲಿ ರಾಮನಗರದಿಂದ ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರ ಬದಲಾವಣೆ ಮಾಡಿ ಕುಮಾರಸ್ವಾಮಿ ಪಶ್ಚಾತ್ತಾಪ ಅನುಭವಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರನ್ನ ಉತ್ತರ ಕರ್ನಾಟಕದ ಹಲವು ಕ್ಷೇತ್ರದ ಜನರು ತಮ್ಮ ಕ್ಷೇತ್ರದಲ್ಲಿ ನಿಲ್ಲುವಂತೆ ಕರೆಯುತ್ತಿದ್ದಾರೆ. ಆದರೆ, ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುತ್ತಾರೆ. ಜೀವನ ಪರ್ಯಂತ ರಾಮನಗರ ಬಿಟ್ಟು ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ," ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ರಾಮನಗರದಲ್ಲಿ ಭಾನುವಾರ ಮಾಹಿತಿ ನೀಡಿದರು.ರಾಮನಗರ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದ ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, "ಪ್ರಧಾನಿಗಳು 'ಮನ್ ಕೀ ಬಾತ್' ಅಂತಾರೆ, ಮುಖ್ಯಮಂತ್ರಿಗಳು ಹೊಸದಾಗಿ 'ಕಾಮ್ ಕೀ ಬಾತ್' ಪ್ರಾರಂಭ ಮಾಡಿದ್ದಾರೆ. ಅದಕ್ಕೆ 18 ಕೋಟಿ ವೆಚ್ಚ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಲವಾರು ಭಾಗ್ಯಗಳನ್ನು ನೀಡಿದ್ದಾರೆ. ಆದರೆ, ಸಾವಿನ ಭಾಗ್ಯ ನೀಡದಿದ್ದರೆ ಸಾಕು," ಎಂದು ಹೀಗಳೆದಿದ್ದಾರೆ. ಇನ್ನು ಭಿನ್ನಮತೀಯ ಶಾಸಕ ಎಚ್.ಸಿ ಬಾಲಕೃಷ್ಣ ಅವರ ವಿರುದ್ದ ಕುದೂರು ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುರವರನ್ನು ಕಣಕ್ಕೆ ಇಳಿಸುವುದಾಗಿ ದೇವೇಗೌಡರು ಮಾಹಿತಿ ನೀಡಿದರು. ಅಲ್ಲದೆ 224 ಕ್ಷೇತ್ರಗಳಲ್ಲೂ ಸಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸೋದಾಗಿ ಅವರು ತಿಳಿಸಿದರು.

Edited By

Shruthi G

Reported By

Shruthi G

Comments