ಕೇಂದ್ರ ಕ್ರೀಡಾ ಸಚಿವರ ಕಣ್ಣಿಗೆ ಬಿದ್ದ ಕಂಬಳ ಓಟಗಾರ: ಉಸೇನ್​ ಬೋಲ್ಟ್​ಗಿಂತಲೂ ವೇಗವಾಗಿ ಓಡುವ ಈತನಿಗೆ ಸಿಗುತ್ತಾ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಅವಕಾಶ?

15 Feb 2020 1:36 PM | General
449 Report

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್​ ಬೋಲ್ಟ್​ಗಿಂತ ವೇಗವಾಗಿ ಕೆಸರು ಗದ್ದೆಯಲ್ಲಿ ಓಡಿದ ವ್ಯಕ್ತಿಯೊಬ್ಬನ ಫೋಟೋ ವೈರಲ್​ ಆಗಿತ್ತು. ಆ ಸುದ್ದಿ ಇದೀಗ ಕ್ರೀಡಾ ಸಚಿವಾಲಯದ ರಾಜ್ಯ ಸಚಿವರವರೆಗೆ ತಲುಪಿದ್ದು, ಆ ವ್ಯಕ್ತಿಯನ್ನು ತಾನು ಭೇಟಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಶ್ರೀನಿವಾಸ್​ ಗೌಡ ಹೆಸರಿನ ವ್ಯಕ್ತಿ ಓಡಿದ್ದು ಹೊಸ ದಾಖಲೆಯೊಂದನ್ನು ಬರೆದಿತ್ತು. 142 ಮೀಟರ್​ ಅಂತರವನ್ನು ಶ್ರೀನಿವಾಸ್​ ಕೇವಲ 13.42 ಸೆಕೆಂಡ್​ಗಳಲ್ಲಿ ಓಡಿದ್ದರು. 100 ಮೀಟರ್​ ಓಟಕ್ಕೆ ಇವರು ತೆಗೆದುಕೊಂಡ ಸಮಯ ಕೇವಲ 9.55 ಸೆಕೆಂಡ್​. ಕರ್ನಾಟಕದಲ್ಲಿ ಮಾತ್ರವೇ ಇರುವ ಕಂಬಳ ಕ್ರೀಡೆಯಲ್ಲಿ ಇದು ದಾಖಲೆಯಾಗುವುದರ ಜತೆ ವಿಶ್ವ ಮಟ್ಟದಲ್ಲಿಯೂ ದಾಖಲೆ ಬರೆದಂತಾಗಿತ್ತು. ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ಕರೆಸಿಕೊಂಡಿರುವ ಉಸೇನ್​ ಬೋಲ್ಟ್​ 100 ಮೀಟರ್​ ಓಡಲು 9.58 ಸೆಕೆಂಡ್​ ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ಬೋಲ್ಟ್​ನ ದಾಖಲೆಯನ್ನು 28 ವರ್ಷದ ಶ್ರೀನಿವಾಸ್​ ಮುರಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿವಾಸ್​ನ ಈ ದಾಖಲೆಯ ಕುರಿತಾಗಿ ಜನ ಮಾತನಾಡಿಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಂದ್ರದವರೆಗೂ ಹೋಗಿ ತಲುಪಿದೆ. ಕೇಂದ್ರ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರೆನ್​ ರಿಜಿಜು ಅವರಿಗೆ ಈ ವಿಷಯ ತಿಳಿದುಬಂದಿದೆ. ಶ್ರೀನಿವಾಸ್​ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರೆನ್​, ಶ್ರೀನಿವಾಸರನ್ನು ತಾವು ದೆಹಲಿಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಎದುರಿಗೆ ಶ್ರೀನಿವಾಸ್​ನ ಓಟದ ವೇಗವನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

ಶ್ರೀನಿವಾಸ್​ರನ್ನು ಒಲಿಂಪಿಕ್ಸ್​ಗೆ ಕಳುಹಿಸಬೇಕು ಎಂದು ಸಾಮಾಜಿಕ ಜಾಲತಾಣಗಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಮಾತನಾಡಿರುವ ಸಚಿವರು, “ನಮ್ಮ ಜನರಿಗೆ ಒಲಿಂಪಿಕ್ಸ್​ನ ನೀತಿ ನಿಯಮಗಳು ಸರಿಯಾಗಿ ತಿಳಿದಿಲ್ಲ. ಒಲಿಂಪಿಕ್ಸ್​ನಲ್ಲಿ ಅಂತಿಮವಾಗಿ ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯವೇ ಗೆಲ್ಲುತ್ತದೆ. ಭಾರತದ ಯಾವುದೇ ಪ್ರತಿಭೆಯು ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಉಸೇನ್​ ಬೋಲ್ಟ್​ಗೆ ಹೋಲಿಕೆ ಮಾಡುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀನಿವಾಸ್​, “ಜನರು ನನ್ನನ್ನು ಉಸೇನ್​ ಬೋಲ್ಟ್​ಗೆ ಹೋಲಿಸುತ್ತಿದ್ದಾರೆ. ಆತ ಅಂತಾರಾಷ್ಟ್ರೀಯ ಕ್ರೀಡಾಪಟು. ನಾನು ಸಾಮಾನ್ಯ ಮನುಷ್ಯ. ಅವರೆಲ್ಲಿ ನಾನೆಲ್ಲಿ” ಎಂದು ಹೇಳಿದ್ದಾರೆ.

ಕಳೆದ ವರ್ಷ ಮಧ್ಯಪ್ರದೇಶದ ಒಬ್ಬ ವ್ಯಕ್ತಿಯು 11 ಸೆಕೆಂಡುಗಳಲ್ಲಿ 100 ಮೀಟರ್​ ಓಡುತ್ತಾನೆ ಎನ್ನುವುದು ಸುದ್ದಿಯಾಗಿದ್ದಾಗಲೂ ಸಹ ಕಿರೆನ್​ ಆತನನ್ನು ಭೇಟಿಯಾಗಿದ್ದರು. (ಏಜೆನ್ಸೀಸ್​)

Courtesy: vijayavani

Comments