ದೇವೇಗೌಡರ ಆತ್ಮಚರಿತ್ರೆಯ ಬಗ್ಗೆ ಕುತೂಹಲ ಮೂಡಿಸಲು ಕಾರಣವೇನು ಗೊತ್ತಾ?

15 Feb 2018 4:08 PM | General
493 Report

ಕೆಲವು ತಿಂಗಳುಗಳಿಂದ ಆಗಿಂದಾಗ್ಗೆ ಮಾಧ್ಯಮಗಳಲ್ಲಿ ಕಾಣಸಿಗುತ್ತಿರುವ ವಿಚಾರವೆಂದರೆ, ದೇವೇಗೌಡರ ಆತ್ಮಚರಿತ್ರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ರಾಜಕಾರಣಿಯೊಬ್ಬರ ಆತ್ಮಚರಿತ್ರೆಯ ಬಗ್ಗೆ ರಾಜಕೀಯ ವಿಶ್ಲೇಷಕರು, ರಾಜಕಾರಣಿಗಳು, ಇತಿಹಾಸ ತಜ್ಞರು, ಇತಿಹಾಸ ಹಾಗು ರಾಜಕೀಯ ವಿದ್ಯಾರ್ಥಿಗಳು ಹಾಗೆಯೇ ಎಲ್ಲ ಭಾಗದ ಜನರು ಕಾತುರದಿಂದ ಕಾಯುತ್ತಿರುವುದು ಇದೆ ಮೊದಲು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಈ ಎಲ್ಲ ವರ್ಗದ ಜನರು ಕಾಯುತ್ತಿರುವುದಕ್ಕೆ ಅನೇಕ ವಿಶೇಷ ಕಾರಣಗಳೂ, ಅಪೇಕ್ಷೆಗಳೂ, ಅನೇಕ ಉತ್ತರಗಳನ್ನು ಜನ ಈ ಪುಸ್ತಕದಲ್ಲಿ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.ಇದೆಲ್ಲದಕ್ಕೂ ಮಿಗಿಲಾಗಿ ದೇವೇಗೌಡರ 85 ವರ್ಷಗಳ ತುಂಬು ಜೀವನದ, ಸುದೀರ್ಘ 60 ವರ್ಷಗಳ ರಾಜಕೀಯ ಬದುಕಿನ ಬಗ್ಗೆ ತಿಳಿಯುವ ಉತ್ಸಾಹ ಗೋಚರಿಸುತ್ತಿದೆ. ವಿಶೇಷವೆಂದರೆ, ಗೌಡರ 60 ವರ್ಷಗಳ ರಾಜಕಾರಣದ ಅನುಭವದಲ್ಲಿ ಸರಿ ಸುಮಾರು ಇಡೀ ಕರ್ನಾಟಕದ ರಾಜಕಾರಣದ ಶೇಕಡಾ 80ರಷ್ಟು ಭಾಗ ಇವರ ಆತ್ಮಚರಿತ್ರೆಯಲ್ಲೇ ತಿಳಿಯಬಹುದಾದ ವಿಶೇಷ ರಾಜಕಾರಣದ ಬದುಕು ದೇವೇಗೌಡರದು.1957ರಲ್ಲಿ ಹಾಸನದ ಹೊಳೆನರಸೀಪುರದ ತಾಲೂಕು ಬೋರ್ಡ್ ಸದಸ್ಯನಾಗಿ, 1962ರಲ್ಲಿ ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ, 1972ರಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕನಾಗಿ, 1983ರಲ್ಲಿ ಸಚಿವನಾಗಿ, 1994ರಲ್ಲಿ ಮುಖ್ಯಮಂತ್ರಿಯಾಗಿ, ಸಂಸದನಾಗಿ, 1996ರಲ್ಲಿ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ಗೌಡರ ರಾಜಕಾರಣದ ಬದುಕು ಪ್ರಜಾಪ್ರಭುತ್ವದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯ ಆರೋಹಣಕ್ಕೆ ದೇಶದ ಜನತೆಯ ಎದುರು ಅದ್ಭುತ ಉದಾಹರಣೆಯೇ ಸರಿ.

ಜನರ ಕೌತುಕ ಹಾಗು ನಿರೀಕ್ಷೆಗಳಿಗೆ ಈ ಕೆಳಕಂಡ ಕಾರಣಗಳಿಗೂ ಇರಬಹುದು:

  • ಒಬ್ಬ ಸಾಮಾನ್ಯ ಹಳ್ಳಿಗನ ರಾಜಕೀಯ ಪ್ರವೇಶ ಹೇಗೆ ಸಾಧ್ಯವಾಯಿತು?
  • ಗೌಡರ ವೈಯಕ್ತಿಕ, ಸಾಂಸಾರಿಕ ಬದುಕಿನ ಬಗ್ಗೆ.
  • ವಿರೋಧ ಪಕ್ಷದ ನಾಯಕರಾಗಿ ವಿಧಾನಸಭೆಯಲ್ಲಿ ಮಂಡಿಸಿರುವ ವಿಚಾರಗಳು ಹಾಗು ಸರ್ಕಾರದ ವೈಫಲ್ಯಗಳ ವಿರುದ್ದದ ಹೋರಾಟಗಳು.
  • ದೇವರಾಜ ಅರಸುರವರೊಂದಿಗಿನ ಒಡನಾಟ.
  • ರಾಮಕೃಷ್ಣ ಹೆಗಡೆಯೊಂದಿಗಿದ್ದ ಗೆಳತನ ಹಾಗು ಸೈದ್ಧಾಂತಿಕ ಬಿನ್ನಾಭಿಪ್ರಾಯ.
  • 18 ತಿಂಗಳ ಮುಖ್ಯಮಂತ್ರಿ ಪದವಿ.
  • 10 ತಿಂಗಳಲ್ಲೇ ಪ್ರಧಾನಿ ಹುದ್ದೆಯಿಂದ ಇಳಿಯಬೇಕಾದ ಕಾರಣಗಳು, ಇಳಿಸಲು ಶ್ರಮಿಸಿದ ವ್ಯಕ್ತಿಗಳು.
  • ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಕುಟುಂಬದಲ್ಲಿ ನಡೆದ ಘಟನಾವಳಿಗಳು.
  • ಸಿದ್ದರಾಮಯ್ಯ ಜೊತೆಗಿನ 25 ವರ್ಷಗಳ ಒಡನಾಟ.
  • ಗೌಡರಿಗೆ ನೀರಾವರಿ ಬಗೆಗಿನ ಹೆಚ್ಚು ಆಸಕ್ತಿ ಏಕೆ?
  • 1989ರ ಚುನಾವಣೆಯ ಸೋಲಿನ ನಂತರ ಪುಟಿದೇಳುವ ಪ್ರಕ್ರಿಯೆ.
  • ಕೃಷ್ಣ , ಕಾವೇರಿ, ಬೆಂಗಳೂರಿನ ಐಟಿ ಕ್ಷೇತ್ರ, ಬೆಂಗಳೂರಿನ ಅಭಿವೃದ್ಧಿ, ಕಾವೇರಿ ನಾಲ್ಕನೇ ಹಂತದ ನೀರಾವರಿ ಯೋಜನೆ - ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಬಗೆಗೆ.
  • ಪ್ರಧಾನಿ ಮೋದಿಯೊಂದಿಗಿನ ಸಂಬಂಧ.

ಈಗಾಗಲೇ, ದೇವೇಗೌಡರು ಅನೇಕ ಸಂದರ್ಭದಲ್ಲಿ ಹೇಳಿರುವಂತೆ, ತಮ್ಮ ವೈಯಕ್ತಿಕ, ಬಾಲ್ಯ ಹಾಗು ಸಾಂಸಾರಿಕ ಸನ್ನಿವೇಶಗಳನ್ನು ಮಗಳು ಶೈಲಜಾ ಚಂದ್ರಶೇಖರ್ ಮತ್ತು ರಾಜಕಾರಣಕ್ಕೆ ಸಂಬಂದಿಸಿದ ಘಟನೆಗಳನ್ನು ಆಪ್ತ, ವೈ.ಎಸ್.ವಿ. ದತ್ತಾ ಬರೆದಿದ್ದಾರೆ.ಪುಸ್ತಕದಲ್ಲಿ ಹೇಳಿರುವ ಅನೇಕ ಸನ್ನಿವೇಶಗಳಿಗೆ ದಾಖಲೆಗಳನ್ನು, ಪತ್ರಗಳನ್ನು ಅನುಬಂಧದ ಭಾಗವಾಗಿ ಲಗತ್ತಿಸಲಾಗಿದೆ ಎಂದೂ ತಿಳಿದು ಬಂದಿದೆ. ಫೆಬ್ರವರಿ ತಿಂಗಳ ಅಂತ್ಯಕ್ಕೆ ಆತ್ಮಚರಿತ್ರೆ 'ಅಗ್ನಿ ದಿವ್ಯ' ಬಿಡುಗಡೆಯಾಗುವ ನಿರೀಕ್ಷೆ ಇದೆ.

Edited By

Shruthi G

Reported By

Shruthi G

Comments