ಮಹದಾಯಿ ವಿಚಾರ ಕುರಿತು ಬಿಎಸ್ ವೈ ವಿರುದ್ಧ ಎಚ್ ಡಿಕೆ ಕಿಡಿ

22 Dec 2017 9:43 AM | General
2069 Report

ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ಹೇಳಿರುವುದು "ಹೈ ಡ್ರಾಮಾ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಡಿಸೆಂಬರ್ ಒಳಗೆ ಸಿಹಿ ಸುದ್ದಿ ಕೊಡುವುದಾಗಿ ಬಿಎಸ್ ವೈ ಹೇಳಿದ್ದರು. ಇದರ ಬಗ್ಗೆ ಆ ಭಾಗದ ಜನ ನೀರು ಸಿಗುವ ಆಸೆಯಲ್ಲಿದ್ದರು. ಆದರೆ ಮಾತುಕತೆ ಸಿದ್ಧರಿರುವುದಾಗಿ ಗೋವಾ ಸಿಎಂ ಪತ್ರ ಬರೆದಿದ್ದಾರೆ. ಮಾತುಕತೆಗಳು 1981 ರಿಂದಲೂ ನಡೆಯುತ್ತಿವೆ. ಇವೆಲ್ಲ ಬರೀ ಹೂ ಮುಡಿಸುವ ಕೆಲಸವಷ್ಟೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಹದಾಯಿ ವಿಚಾರದಲ್ಲಿ ಹೋರಾಟಗಾರರು ಮತ್ತು ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಬಿ.ಜೆ.ಪಿ. ನಾಯಕರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.ಮಹದಾಯಿ ವಿಚಾರವನ್ನು ಚುನಾವಣೆ ಕಾರಣಕ್ಕೆ ಬಿ.ಜೆ.ಪಿ. ಪ್ರಸ್ತಾಪಿಸಿದ್ದು, ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಇಂದಿನ ಸಮಾವೇಶದಲ್ಲಿ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿ ಬರೆದಿರುವ ಪತ್ರವನ್ನು ಓದಿದ್ದಾರೆ. ಇದರಿಂದ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ಮಹದಾಯಿ ವಿಚಾರಕ್ಕೆ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರದಿಂದ ಆದೇಶವನ್ನು ಹೊರಡಿಸಬೇಕಿದೆ. ಇದನ್ನು ಬಿಟ್ಟು ಬಿ.ಜೆ.ಪಿ. ಅಧ್ಯಕ್ಷ ಯಡಿಯೂರಪ್ಪನವರು ಉತ್ತರ ಕರ್ನಾಟಕದ ಜನರ ಬಾಳಿನೊಂದಿಗೆ ಚೆಲ್ಲಾಟವಾಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.ನಾನು ಮತ್ತು ಮುಖ್ಯಮಂತ್ರಿಯವರು ಹಲವಾರು ಪತ್ರಗಳನ್ನು ಬರೆದಾಗ, ಪ್ರತಿಕ್ರಿಯೆ ನೀಡದ, ಸ್ಪಂದಿಸದ ಗೋವಾ ಸಿ.ಎಂ. ಈಗ ಬಿ.ಜೆ.ಪಿ. ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಯಡಿಯೂರಪ್ಪನವರು ಟೋಪಿ ವ್ಯವಹಾರವನ್ನು ಬಿಟ್ಟು, ಕೇಂದ್ರದಿಂದ ಆದೇಶ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.

Edited By

Shruthi G

Reported By

Shruthi G

Comments