ಹೈದರಾಬಾದ್‍ : ವರುಣನ ಆರ್ಭಟಕ್ಕೆ ನಾಲ್ವರು ಬಲಿ

03 Oct 2017 11:58 AM | General
407 Report

ಹೈದರಾಬಾದ್‍ನಲ್ಲಿ ಭಾರೀ ಮಳೆಯಿಂದ ಹೈದರಾಬಾದ್‍ನ ಅನೇಕ ಸ್ಥಳಗಳಲ್ಲಿ ಚರಂಡಿ ಮತ್ತು ರಾಜಕಾಲುವೆಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಹೈದರಾಬಾದ್ ಮತ್ತು ಸಿಕಂದರಾಬಾದ್‍ಗಳ ಅನೇಕ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ಭಾಗಶಃ ಮುಳುಗಡೆಯಾಗಿವೆ. ಮಳೆ ಇಂದೂ ಕೂಡ ಮುಂದುವರಿದ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹೆದರಾಬಾದ್‍ನಲ್ಲಿ ಮೇಘಸ್ಫೋಟದಿಂದ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮುತ್ತಿನನಗರಿ ಅಕ್ಷರಶಃ ಜಲಪ್ರಳಯದಿಂದ ತತ್ತರಿಸಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದ ಗೋಡೆಯೊಂದು ಕುಸಿದು ಎಂಟು ತಿಂಗಳ ಮಗು ಮತ್ತು ತಂದೆ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಇನ್ನಿಬ್ಬರು ಅಸುನೀಗಿದ್ದಾರೆ. ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು, ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಜನರು ಇಡೀ ರಾತ್ರಿ ಕಗ್ಗತ್ತಲಲ್ಲೇ ಕಳೆದರು. ಭಾರೀ ಮಳೆ ಮತ್ತು ಜಲಪ್ರಳಯದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

Edited By

Suresh M

Reported By

Madhu shree

Comments