ಅದ್ಧೂರಿ ದಸರಾಗೆ ಸಿಂಗಾರಗೊಳ್ಳುತ್ತಿರುವ ಮೈಸೂರು

14 Sep 2017 1:35 PM | General
330 Report

ಮೈಸೂರು ದಸರಾಗೆ ಅದ್ಧೂರಿ ಸಿದ್ದತೆಗಳು ಸಾಗುತ್ತಿದ್ದರೆ, ಇತ್ತ ಅರಮನೆಯಲ್ಲಿ ಸದ್ದಿಲ್ಲದೆ ನವರಾತ್ರಿ ಪ್ರಕ್ರಿಯೆಗಳು ಆರಂಭಗೊಂಡಿದೆ. ರತ್ನ ಖಚಿತ ಸಿಂಹಾಸನ ಜೋಡಣೆ ಪ್ರಕ್ರಿಯೆಯು ನಾಳೆ ನಡೆಯಲಿದೆ. ರಾಜವಂಶಸ್ಥರು, ಖಾಸಗಿಯಾಗಿ ಅರಮನೆಯಲ್ಲಿ ಸಂಪ್ರದಾಯದಂತೆ ದಸರೋತ್ಸವ ಆಚರಿಸುತ್ತ ಬಂದಿದ್ದಾರೆ. ದಸರಾದಲ್ಲಿ ಪ್ರಮುಖ ಆಕರ್ಷಣೆಯಂದರೆ ರತ್ನ ಖಚಿತ ಸಿಂಹಾಸನ.ಈ ಸಿಂಹಾಸನವನ್ನು ಅರಮನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ಅದನ್ನು ಜೋಡಿಸುವ ಕಾರ್ಯ ನಾಳೆ ಬೆಳಗ್ಗೆ ನಡೆಯಲಿದೆ.

ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನವನ್ನು ಜೋಡಿಸಿ ರಾಜವಂಶಸ್ಥರು ಇದರ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ಆನಂತರ ಅದನ್ನು ಪ್ರತ್ಯೇಕಗೊಳಿಸಿ ಅರಮನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ದಸರಾ ಹಿನ್ನೆಲೆಯಲ್ಲಿ ಅರಮನೆಯನ್ನು ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗುತ್ತಿದ್ದು , ಈಗಾಗಲೇ ಕಾರ್ಮಿಕರು ಬಣ್ಣ ಲೇಪನ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಬೃಹತ್ ಅರಮನೆಗೆ ವರ್ಣರಂಜಿತ ವಿವಿಧ ಬಣ್ಣಗಳನ್ನು ಲೇಪಿಸುತ್ತಿದ್ದು , ನೋಡಲು ಸುಂದರವಾಗಿ ಕಾಣುತ್ತಿದೆ. ದಸರಾ ಮಹೋತ್ಸವದಲ್ಲಿ ಹೆಚ್ಚಾಗಿ ಪ್ರವಾಸಿಗರು ಆಗಮಿಸಲಿದ್ದು , ವಾಹನಗಳ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.

Courtesy: Dailyhunt

Comments