ತೂಗುದೀಪ ಫ್ಯಾಮಿಲಿಯ ಮತ್ತೊಬ್ಬ ಹೀರೋ ಚಿತ್ರರಂಗಕ್ಕೆ ಎಂಟ್ರಿ

14 Dec 2017 4:32 PM | Entertainment
380 Report

ತೂಗುದೀಪ ಫ್ಯಾಮಿಲಿಯಲ್ಲಿ ಈಗಾಗಲೇ ಮೂವರು ಕಲಾವಿದರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ಇನ್ನೂ ದರ್ಶನ್ ಸಹೋದರ ಅದ್ಬುತ ಸಿನಿಮಾಗಳನ್ನು ನಿರ್ದೇಶನ ಮಾಡಿ ಅಭಿಮಾನಿಗಳಿಂದ 'ತಾಂತ್ರಿಕ ಬ್ರಹ್ಮ' ಅಂತಾನೇ ಹೆಸರು ಪಡೆದುಕೊಂಡಿದ್ದಾರೆ. ನಿರ್ದೇಶನದ ಜೊತೆಯಲ್ಲಿ ಆಗಾಗ ಕೆಲ ಚಿತ್ರಗಳಲ್ಲಿಯೂ ಅಭಿನಯಿಸುತ್ತಿದ್ದಾರೆ ದಿನಕರ್ ತೂಗುದೀಪ್.

ಇವರುಗಳನ್ನು ಬಿಟ್ಟು ದರ್ಶನ್ ಅವರ ಪುತ್ರ ವಿನೀಶ್ ಕೂಡ ಅಪ್ಪನ ಜೊತೆಯಲ್ಲಿ 'ಐರಾವತ' ಸಿನಿಮಾದಲ್ಲಿ ಆಕ್ಟ್ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಈ ಮೂವರ ನಂತರ ದರ್ಶನ್ ಅವರ ಸಹೋದರ ಸಂಬಂಧಿ ಮನೋಜ್ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಿತರಾಗುತ್ತಾರೆ ಎನ್ನುವುದು ಈ ಹಿಂದೆಯೇ ತಿಳಿದ್ದಿತ್ತು. ಅದರಂತೆ ಮನೋಜ್ ಅಭಿನಯಕ್ಕೆ ವೇದಿಕೆ ಸಿದ್ಧವಾಗಿದೆ. ಅರವಿಂದ್ ಕೌಶಿಕ್ ಚಿತ್ರದಲ್ಲಿ ಮನೋಜ್ ನಾಯಕನಾಗಿ ಆಕ್ಟ್ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈಗ ಮನೋಜ್ ನಿರ್ದೇಶಕ ರಘುಶಾಸ್ತ್ರಿ ಡೈರೆಕ್ಟ್ ಮಾಡಲಿರುವ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲಿದ್ದಾರಂತೆ.

'ರನ್ ಆಂಟನಿ' ಸಿನಿಮಾದ ನಂತರ 'ಲೂಸ್ ಕನೆಕ್ಷನ್' ವೆಬ್ ಸೀರಿಸ್ ಡೈರೆಕ್ಟ್ ಮಾಡಿದ್ದ ನಿರ್ದೇಶಕ ರಘುಶಾಸ್ತ್ರಿ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಕ್ಕೂ ಕೆಲಸ ಮಾಡಿದ್ದರು. ಸದ್ಯ ರಘು ತಮ್ಮ ಎರಡನೇ ಸಿನಿಮಾದ ನಿರ್ದೇಶನಕ್ಕೆ ತಯಾರಿ ಮಾಡಿಕೊಂಡಿದ್ದು, ಆ ಚಿತ್ರಕ್ಕೆ ಮನೋಜ್ ನಾಯಕನಾಗಿ ಅಭಿನಯಿಸುವ ಎಲ್ಲಾ ಸಾಧ್ಯತೆಗಳಿವೆಯಂತೆ.ಒನ್ ಲೈನ್ ಕಥೆ ಕೇಳಿರುವ ಮನೋಜ್, ರಘುಶಾಸ್ತ್ರಿ ನಿರ್ದೇಶನದಲ್ಲಿ ಅಭಿನಯಿಸುವುದಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಲ್ಲಿ ರಘು ಬಿಜಿ ಆಗಿದ್ದು, ಮಾರ್ಚ್ ನಲ್ಲಿ ಮನೋಜ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ.

Edited By

Shruthi G

Reported By

Shruthi G

Comments