ಕೊನೆಗೂ ಪತ್ತೆಯಾಯಿತ್ತು ನಿಂಗಮ್ಮ ಶವ
ಇದೇ 13ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಕೊಚ್ಚಿ ಹೋಗಿದ್ದರು. ಪುಷ್ಪಾ ಶವ ಕುಂಬಳಗೋಡು ಸೇತುವೆ ಬಳಿ ಇದೇ 16ರಂದು ಪತ್ತೆಯಾಗಿತ್ತು. ನಿಂಗಮ್ಮ ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು (ಎನ್ಡಿಆರ್ಎಫ್) 41 ಕಿ.ಮೀ. ಶೋಧ ಕಾರ್ಯ ನಡೆಸಿತ್ತು.
ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಬತ್ತು ದಿನಗಳ ಬಳಿಕ ಜ್ಞಾನಭಾರತಿ ಸಮೀಪದ ವೃಷಭಾವತಿ ಕಾಲುವೆಯಲ್ಲಿ ಭಾನುವಾರ ಪತ್ತೆಯಾಯಿತು.ಕಾಲುವೆಯ ಆಳ ಇರುವ ಪ್ರದೇಶಗಳಲ್ಲಿ ಶವ ಸಿಕ್ಕಿಕೊಂಡಿರಬಹುದು ಎಂದು ಶಂಕಿಸಿದ ಎನ್ಡಿಆರ್ಎಫ್ ತಂಡ, 22 ಸ್ಥಳಗಳನ್ನು ಗುರುತಿಸಿ ಶೋಧ ಕಾರ್ಯ ಮುಂದುವರಿಸಿತ್ತು.
5 ಲಕ್ಷ ಪರಿಹಾರ ವಿತರಣೆ:
ಸಿ.ವಿ.ರಾಮನ್ನಗರದ ಕೃಷ್ಣಪ್ಪ ಗಾರ್ಡನ್ನ ಕೊಳೆಗೇರಿಯಲ್ಲಿ ಮೃತಪಟ್ಟಿದ್ದ ನರಸಮ್ಮ (18) ಅವರ ಕುಟುಂಬದ ಸದಸ್ಯರಿಗೆ 5 ಲಕ್ಷ ಪರಿಹಾರವನ್ನು ಮೇಯರ್ ಆರ್.ಸಂಪತ್ ರಾಜ್ ಭಾನುವಾರ ವಿತರಿಸಿದರು. ನರಸಮ್ಮ ಬಯಲು ಶೌಚಕ್ಕೆ ಹೋಗಿ ರಾಜಕಾಲುವೆಗೆ ಬಿದ್ದು ಇದೇ 15ರಂದು ಮೃತಪಟ್ಟಿದ್ದರು. ಕೊಳೆಗೇರಿಯಲ್ಲಿ ಶೌಚಾಲಯ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದರು. ‘ಶೀಘ್ರದಲ್ಲೇ ಅದನ್ನು ಕಟ್ಟಿಸಿಕೊಡುತ್ತೇವೆ’ ಎಂದು ಮೇಯರ್ ಭರವಸೆ ನೀಡಿದರು.
Comments